Saturday, 19 January 2013

"ತಪ್ಪು ಯಾರದು?"



ಮೋಸ ಮಾಡಿದ್ದು ಅವಳಲ್ಲ
ನಾನೇ ಮೋಸ ಹೋದೆ ಅದು
ನಿಮ್ಮಿಂದಲೇ ಅಂತ ಕಣ್ಣು,
ಮನಸ್ಸು,ಹೃದಯದ ಮೇಲೆ ಕೂಗಾಡಿದೆ
ಸುಮ್ಮನೆ ಹೋಗುತ್ತಿದ್ದ ನನ್ನನ್ನು ಅವಳನ್ನು
ನೋಡು ನೋಡು ಅಂದಿದ್ದು ಮನಸ್ಸು ಅದಕ್ಕೆ
ನೋಡಿದೆ ತಪ್ಪು ನನ್ನದಿಲ್ಲ ಅಂದಿತು ಕಣ್ಣು...

ನಾನು ರಸ್ತೆಯಲ್ಲಿ ಹೋಗುವವರನ್ನೇಲ್ಲಾ
ನೋಡು ಅಂತ ಹೇಳುತ್ತೀನಿ ಆದರೆ
ಪ್ರೀತಿಸು ಅಂದಿಲ್ಲ ಅವಳಿಗೆ
ನಿನ್ನೆದೆಯಲ್ಲಿ ಜಾಗ ಕೊಟ್ಟಿದ್ದು
ಹೃದಯ ತಪ್ಪೆಲ್ಲ ಅವನದೇ
ನನ್ನ ತಪ್ಪಿಲ್ಲ ಅಂದಿತು ಮನಸ್ಸು....

ನನ್ನ ಮಾತು ಕೇಳುತ್ತಿರಲಿಲ್ಲ ನೀನು
ಒಬ್ಬನೇ ಇದ್ದು ಇದ್ದು ಬೇಸರವಾಗಿತ್ತು
ಪ್ರೀತಿಯ ಪ್ರಪಂಚ ನಿನಗೆ
ತೋರಿಸುವ ಆತುರದಲ್ಲಿ
ನೋಡಲು ಮುಗ್ಧವಾಗಿದ್ದ ಅವಳು ನಿನಗೆ
ಸರಿಯಾದ ಜೋಡಿ ಆಗುತ್ತಾಳೆಂಬ
ನಂಬಿಕೆಯಲ್ಲಿಜಾಗ ಕೊಟ್ಟಿದ್ದು
ನನ್ನದೇ ತಪ್ಪು ಆದರೆ ನೀನು
ಮೋಸ ಹೋಗಲೂ ನಿನ್ನ ಅತಿಯಾದ
ನಂಬಿಕೆ ಮತ್ತು ಪ್ರೀತಿಯೇ
ಕಾರಣ ನನ್ನದೇನು 
ತಪ್ಪಿಲ್ಲ ಅಂದಿತು ಹೃದಯ.....

ಹೌದು ನನಗೆ ಮೋಸ ಮಾಡಿ
ಹೋದವಳನ್ನು ಮರೆಯುವ ಬದಲು
ಅವಳನ್ನು ಪದೇ ಪದೇ
ನೆನಪಿಸಿಕೊಳ್ಳುವ ನಾನೇ ತಪ್ಪು
ಮಾಡುತ್ತಿರುವುದು
ತಪ್ಪೆಲ್ಲ ನನ್ನದೇ....
          
          - ಎನ್.ರಾಜೇಶ್.ಕುಮಾರ್.ನೇರಳಕಟ್ಟೆ...

Monday, 14 January 2013

"ಶ್ರೇಷ್ಠ ಜೀವಿ"



ಶ್ರೀಮಂತರ ಮನೆಯ ನಾಯಿಗೆ
ಸಿಗುವ ಗೌರವ ಆ ಮನೆ ಕಾಯುವ
ಕೆಲಸಗಾರನಿಗೆ ಇಲ್ಲ
ಆದರೂ ಮನುಷ್ಯ ಶ್ರೇಷ್ಠ ಜೀವಿ....?

ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ
ಮಕ್ಕಳ ಆಸೆಗಳನ್ನು ಪೂರೈಸಿ
ಅವರ ಸಂತೋಷದಲ್ಲಿ ತಮ್ಮ ಸಂತೋಷ ಕಾಣುವ
ಮುದಿ ತಂದೆ-ತಾಯಿಯರನ್ನು ನೋಡಿಕೊಳ್ಳದೇ
ಕೊನೆಯ ಕಾಲದಲ್ಲಿ ನೆಮ್ಮದಿ ನೀಡದೇ ವೃದ್ಧಾಶ್ರಮಕ್ಕೆ
ಕಳುಹಿಸುವ ನಾವು ಶ್ರೇಷ್ಠ ಜೀವಿಗಳು....?

ಇನ್ನೊಬ್ಬರ ಹೊಟ್ಟೆಯ ಮೇಲೆ ಹೊಡೆದು
ಆ ಹಣದಲ್ಲಿ ಬದುಕುವ,
ಮನಸ್ಸಿನಲ್ಲಿ ಬರಿ ಕೆಟ್ಟದು ತುಂಬಿಕೊಂಡು
ಎದುರಿಗೆ ನಗು ನಗುತ್ತ ಮಾತಾಡಿ ಮೋಸ ಮಾಡುವ
ಮನುಷ್ಯರು ಶ್ರೇಷ್ಠ ಜೀವಿಗಳು...?

ಸಂಬಂಧಗಳಿಗೆ ಬೆಲೆಕೊಡದೇ
ಹಣಕ್ಕೆ ಬೆಲೆಕಟ್ಟುವ,
ಹಣಕ್ಕಾಗಿ ಸ್ವಂತ ಅಪ್ಪ-ಅಮ್ಮ ಅಣ್ಣ-ತಮ್ಮಂದಿರನ್ನು
ಕೊಲೆ ಮಾಡುವ ನಾವು ಶ್ರೇಷ್ಠ ಜೀವಿಗಳು...?

ದೇವರ ಹೆಸರಿನಲ್ಲಿ ಮೂಢನಂಬಿಕೆಯನ್ನು ಬೆಳೆಸಿ
ಪ್ರಾಣಿಬಲಿ-ನರಬಲಿ ಕೊಡುವ,
ಕಳ್ಳ ಕಪಟ ಸನ್ಯಾಸಿಗಳನ್ನು ದೇವರು ಅಂತ
ನಂಬಿ ತಮ್ಮದೆಲ್ಲಾ ಕೊಟ್ಟು ಮೋಸ ಹೋಗುವ
ನಾವು ಶ್ರೇಷ್ಠ ಜೀವಿಗಳು....?

ಹಸಿವೆಯಿಂದ ಬಳಲುತ್ತಿದ್ದರೂ
ಪ್ರಾಣಿ-ಪಕ್ಷಿಗಳು ಮಾಡಿಕೊಳ್ಳುವುದಿಲ್ಲ
ಆತ್ಮಹತ್ಯೆ..
ಕೋಟಿಕೋಟಿ ಹಣ ಇದ್ದರೂ
ಒಂದು ಸಮಸ್ಯೆ ಬಂದರೆ ಅದನ್ನು
ಎದುರಿಸಲಾಗದೆ ಮನುಷ್ಯ ಮಾಡಿಕೊಳ್ಳುತ್ತಾನೆ
ಆತ್ಮಹತ್ಯೆ ಇಲ್ಲದಿದ್ದರೆ ಮಾಡುತ್ತಾರೆ
ಇನ್ನೊಬ್ಬರ ಹತ್ಯೆ..
ಆದರೂ ಮನುಷ್ಯ ಶ್ರೇಷ್ಠ ಜೀವಿ...?

      ಎನ್.ಆರ್.ಕೆ.ನೇರಳಕಟ್ಟೆ...

Friday, 11 January 2013

"ಪಯಣ"

ಇಷ್ಟಪಟ್ಟ ಹುಡುಗಿಯ ಜೊತೆ
ಪ್ರೀತಿಯೆಂಬ ಬಸ್ಸು ಏರಿ
ಪಯಣ ಶುರುಮಾಡಿದೆ
ಪ್ರೀತಿಯ ಹುಡುಗಿ ಜೊತೆಯಲ್ಲಿರುತ್ತಾಳೆಂಬ
ಧೈರ್ಯದಲ್ಲಿ ಕಣ್ಣುಮುಚ್ಚಿ ಕನಸು
ಕಾಣತ್ತಿದ್ದೆ ಜೀವನದ ಬಗ್ಗೆ.....

ಆದರವಳು ಮಧ್ಯೆದಾರಿಯಲ್ಲಿ
ಸಿಕ್ಕ ಇನ್ನೊಬ್ಬನ ಜೊತೆ ಇಳಿದುಹೋಗಿದ್ದು
ನನಗದು ತಿಳಿಯಲೇ ಇಲ್ಲ....

ಕಣ್ಣು ತೆರೆದು ನೋಡಿದಾಗ
ವಾಪಾಸು ಬರಲಾರದಷ್ಟು ದೂರ ಬಂದು
ದೊಡ್ಡ ಕಣಿವೆಯ ಎದುರು ಪ್ರೀತಿಯ ಬಸ್ಸು ನಿಂತಿತ್ತು
ಮುಂದೆ ಹೋಗಲ್ಲಿಕೆ ದಾರಿಯಿಲ್ಲ
ಹಿಂದೆ ಬರಲ್ಲಿಕ್ಕೂ ತಿರುವು ಇಲ್ಲ
ಆ ಪ್ರೀತಿಯೆಂಬ ಬಸ್ಸಲ್ಲಿ ನನ್ನ ತರದವರೇ
ತುಂಬಾ ಜನ ಇದ್ದರು
ಪ್ರೀತಿಸಿದವಳು ಮೋಸ ಮಾಡಿದಳೆಂದು
ಏನು ಸಹ ಆಲೋಚಿಸದೇ
ಅದೇ ಕಣಿವೆಗೆ ಹಾರಿ ಪ್ರಾಣಬಿಟ್ಟರೆ
ಇನ್ನುಳಿದವರು ಹಿಡಿಶಾಪ ಹಾಕುತ್ತಿದ್ದರು
ಪ್ರೀತಿಗೆ ಪ್ರೀತಿಸಿದವಳಿಗೆ...

ನಾನು ಮೋಸಮಾಡಿದವಳಿಗೋಸ್ಕರ
ಸಾಯದೇ ಕೊರಗದೇ
ಮರಳಿ ಹಳೆಯ ಜೀವನಕ್ಕೆ
ತಿರುಗಿ ಹೋಗಲೂ
ದೇವರು ಕಾಲುದಾರಿಯನ್ನಾದರೂ
ಇಟ್ಟಿರುತ್ತಾನೆ ಅನ್ನುವ
ನಂಬಿಕೆಯಲ್ಲಿ ಕಗ್ಗಾಡಿನಲ್ಲಿ
ದಾರಿ ಹುಡುಕುತ್ತ ನಡದೇ ಒಬ್ಬಂಟಿಗನಾಗಿ

                  ಎನ್.ಆರ್.ಕೆ.ನೇರಳಕಟ್ಟೆ...

Sunday, 6 January 2013

"ನನಸಾದ ಕನಸು"

      
    ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿರುವ ಭಾರತಕ್ಕೆ ಹೋಗುವ ವಿಮಾನವೇರಿದೆ.೨ ವರ್ಷದ ನಂತರ ಅಮೇರಿಕಾಕ್ಕೆ ಗುಡ್ ಬೈ ಹೇಳಿ ತಾಯಿನಾಡಾದ ಭಾರತಕ್ಕೆ ಹೊಗುತ್ತಿದ್ದೇನೆ..ನಾಳೆ ಅಂದರೆ ಹಳೆಯ ಗೆಳೆಯರನ್ನು, ಮನೆಯವರನ್ನು ಕಾಣಬಹುದು ಅನ್ನುವ ಖುಷಿ ಒಂದೆಡೆ ಆದರೆ ಊರಿಗೆ ಬಂದ ಕೂಡಲೇ ಮದುವೆ ಆಗು ಅಂತ ಹೇಳುತ್ತಿರುವ ಅಮ್ಮನಿಂದ ನಾನು ಮದುವೆಯಾಗುವುದಿಲ್ಲ ಅಂತ ಹೇಳುವುದು ಹೇಗೆ ಅನ್ನುವ ಭಯ ಇನ್ನೊಂದು ಕಡೆ..
    ಅಪ್ಪ ಅಮ್ಮನ ಬಿಟ್ಟು ಇಷ್ಟು ದೂರ ೨ ವರ್ಷ ಯಾಕಾಗಿ ಇದ್ದೆ ಎಂದು ಆಲೋಚನೆ ಮಾಡಿದಾಗ ಕಣ್ಣುಮುಂದೆ ಬಂದಿದ್ದೆ ತನ್ನ ಪ್ರೀತಿ ಮತ್ತು ಪ್ರೀತಿಸಿದವಳು..ಅಮ್ಮ ಮದುವೆಯಾಗು ಅಂದಾಗೆಲ್ಲಾ ಕಣ್ಣುಮುಂದೆ ಬರುತ್ತಿದ್ದ ಹುಡುಗಿ" ಹಾಸಿನಿ".ತಾನು ಮನಸಾರೆ ಇಷ್ಟಪಟ್ಟು ಪ್ರೀತಿಸಿದ ಹುಡುಗಿ.ನನ್ನದು ಒಂದು ಸೈಡ್ ಲವ್ ಆಗಿತ್ತು.ನಾನು ಅವಳನ್ನು ೩ ವರ್ಷದಿಂದ ಪ್ರೀತಿಸುತ್ತಿದ್ದೇನೆ ಆದರೆ ಅವಳಿಗೆ ನಾನು ಪ್ರೀತಿಸುತ್ತಿರುವ ವಿಷಯ ಹೇಳಿರಲಿಲ್ಲ.ಯಾಕೆಂದರೆ ಮನೆಯ ಹತ್ತಿರದ ಹುಡುಗಿ.ಅವಳ ತಂದೆ ನಮ್ಮ ತಂದೆ ಪ್ರಾಣ ಸ್ನೇಹಿತರು.ನನ್ನ ಈ ಪ್ರೀತಿಯ ವಿಷಯದಿಂದ ಅವರುಗಳು ಬೇರೆಯಾಗುವುದು ನನಗೆ ಇಷ್ಟವಿರಲಿಲ್ಲ ಅದು ಅಲ್ಲದೆ ಅವಳಿಗೆ ನನ್ನ ಪ್ರೀತಿಯ ವಿಷಯ ಹೇಳಿದಾಗ "ನೀನಂದ್ರೆ ನನಗಿಷ್ಟವಿಲ್ಲ ಅಂದರೆ ಅವಳ ಎದುರು ಅಸಹಾಯಕನಾಗಿ ನಿಲ್ಲುವ ಪರಿಸ್ಥಿತಿ ನೆನೆದು ಭಯಬಿದ್ದು ಅವಳಿಗೂ ಹೇಳಿರಲಿಲ್ಲ.ಹೇಳದೆ ಇದ್ದಿದ್ದಕ್ಕೆ ನನಗೆ ತಕ್ಕಶಾಸ್ತಿ ಆಯ್ತು ಅವಳಿಗೆ ಮನೆಯಲ್ಲಿ ಬೇರೆ ಹುಡುಗನನ್ನು ನೋಡಿದರು.
   ಅದೇ ಸಮಯದಲ್ಲಿ ನನಗೆ ವಿದೇಶಕ್ಕೆ ಹೋಗುವ ಅವಕಾಶ ದೊರಕಿತು.ಬೇರೆ ಸಮಯದಲ್ಲಾಗಿದ್ದರೆ ಹೋಗುತ್ತಿರಲಿಲ್ಲವಾಗಿತ್ತು.ಪ್ರೀತಿಸಿದ ಹುಡುಗಿಯ ನಿಶ್ಚಿತಾರ್ಥ ಫಿಕ್ಸ್ ಆಗಿತ್ತು ಅವಳ ಮದುವೆಯನ್ನು ನೋಡುವುದು ಹೇಗೆ ಅಂದುಕೊಂಡು ಸಿಕ್ಕ ಅವಕಾಶವನ್ನು ಬಿಡದೆ ತನ್ನ ಪ್ರೀತಿಯನ್ನು ಪ್ರೀತಿಸಿದವಳನ್ನು ಬಿಟ್ಟು ಹೋಗಲು ನಿರ್ಧರಿಸಿದೆ.ಅಮ್ಮ ಎಷ್ಟು ಬೇಡ ಅಂದರೂ ಕೇಳದೆ ನಿಶ್ಚಿತಾರ್ಥಕ್ಕೆ ೧೦ ದಿನ ಇರುವಾಗ ಅಮೇರಿಕಾಕ್ಕೆ ಬಂದುಬಿಟ್ಟೆ.ಅದೇ ಕೊನೆ ಅವಳನ್ನು ನೋಡಿದ್ದು.೨ ವರ್ಷ ಅಮೇರಿಕಾದಲ್ಲಿ ಕೆಲಸಮಾಡಿದೆ ಅಮ್ಮ ಊರಿಗೆ ಬಾ ಮದುವೆಯಾಗು ಅಂತ ಪ್ರಾಣ ತಿನ್ನುತ್ತ ಇದ್ದಳು ಅದಕ್ಕೋಸ್ಕರ ಊರಿಗೆ ಹೊರಟಿದ್ದು.ನನ್ನ ಆಸೆ ಅಂತೂ ಕೈಗೂಡಲಿಲ್ಲ.ಅಮ್ಮನ ಆಸೆ ಆದರೂ ನೆರವೇರಿಸೋಣ ಅಂತ ಅಂದುಕೊಂಡು ಮಲಗಿದೆ.
   ಎಚ್ಚರಗೊಂಡಾಗ ಮಂಗಳೂರಿನ ವಿಮಾನ ನಿಲ್ದಾಣದಲ್ಲಿದ್ದೆ.ಕರೆದುಕೊಂಡು ಹೋಗಲಿಕ್ಕೆ ತಂದೆ ಬಂದಿದ್ದರು.ಹೇಗಾಯಿತು ಪ್ರಯಾಣ ಅದು ಇದು ವಿಚಾರಿಸಿದರು.ತಂದೆಯ ಹತ್ತಿರ ಅಮೇರಿಕಾದ ವಿಷಯ ಮಾತನಾಡುತ್ತ ಮನೆಗೆ ಬಂದೆ.ಅಮ್ಮ ಮನೆಯ ಎದುರುಗಡೆ ನನಗೋಸ್ಕರ ಕಾಯುತ್ತಿದ್ದಳು.ನನ್ನ ನೋಡಿದಾಗ ಎಷ್ಟು ಖುಷಿಪಟ್ಟಳು ಅಮ್ಮ ನಾನು ಊರಿನಲ್ಲಿದ್ದಾಗ ತುಂಬಾ ದಪ್ಪವಾಗಿದ್ದಳು ನನ್ನ ಬಗ್ಗೆ ಆಲೋಚಿಸಿ ಸಣ್ಣಗಾಗಿ ಹೋಗಿದ್ದಳು.ತನಗೆ ಪ್ರೀತಿ ಸಿಗಲಿಲ್ಲ ಅಂದುಕೊಂಡು ಅಮ್ಮನ ಪ್ರೀತಿ ಮರೆತುಹೋಗಿದ್ದಕ್ಕೆ ಬೇಜಾರಾಯ್ತು.ಇನ್ನು ಮೇಲೆ ಅಮ್ಮನ ಬಿಟ್ಟು ಎಲ್ಲೂ ಹೋಗಬಾರದು ಅಂತ ನಿರ್ಧರಿಸಿದೆ.
   ಅಮ್ಮ ನನಗೋಸ್ಕರ ನನಗೆ ಇಷ್ಟವಾದ ಬಂಗುಡೆಮೀನು ಸಾರ್ ಮಾಡಿದ್ದಳು.೨ ವರ್ಷವಾಗಿತ್ತು ಅಮ್ಮನ ಅಡುಗೆ ತಿನ್ನದೆ.ಊಟ ಮಾಡುತ್ತಾ ನನ್ನ ಎಲ್ಲಾ ಗೆಳೆಯರನ್ನು ಮನೆಯ ಹತ್ತಿರದವರನ್ನು ಕೇಳಿದೆ.ಅದಕ್ಕೆ ಎಲ್ಲಾ ಚೆನ್ನಾಗಿದ್ದಾರೆ ಎಲ್ಲರಿಗೂ ಮದುವೆ ಆಯ್ತು ನೀನು ಮಾತ್ರ ಮಾಡಿಕೊಂಡಿಲ್ಲ.ಈ ಸಲ ಮದುವೆ ಮಾಡಿಕೊಳ್ಳೋ ಮನು ಅಂದಾಗ ಆಯ್ತಮ್ಮ ಇನ್ನೊಂದು ೨ ತಿಂಗಳು ಹೋಗಲಿ ಆಮೇಲೆ ಆಗುತ್ತೀನಿ ಅಂದೆ.ಅವಾಗಲೇ "ಹಾಸಿನಿ"ಯ ನೆನಪಾಗಿದ್ದು..
  ಅಮ್ಮ ಹಾಸಿನಿ ಹೇಗಿದ್ದಾಳೆ? ಅವಳ ಗಂಡನ ಮನೆ ಎಲ್ಲಿ? ಅವಳ ಗಂಡ ಏನು ಕೆಲಸದಲ್ಲಿದ್ದಾರೆ ಅಂತ ಕೇಳಿದಾಗ ನೀನು ಕೇಳುತ್ತಿರುವುದು ನಮ್ಮ ಪಕ್ಕದಮನೆ ಹುಡುಗಿ ಹಾಸಿನಿಯ ವಿಷಯನಾ ಅಂತ ಕೇಳಿದರು.ಹೌದಮ್ಮ ನಾನು ಹೋಗುವಾಗ ಅವಳಿಗೆ ನಿಶ್ಚಿತಾರ್ಥ ಫಿಕ್ಸ್ ಆಗಿತ್ತು ಅವಳ ಮದುವೆಗೆ ಇರಲಿಲ್ಲ ಅದಕ್ಕೆ ಕೇಳಿದೆ.ಅಯ್ಯೋ ಪಾಪ ಆ ಹುಡುಗಿ ಅವಳ ಹಣೆಬರಹನೇ ಚೆನ್ನಾಗಿಲ್ಲ ಕಣೋ ಅಂದರು ಅಮ್ಮ ಯಾಕೆ ಏನಾದರೂ ಸಮಸ್ಯೆ ಆಯ್ತಾ ಅವಳಿಗೆ ಎಂದು ಕೇಳಿದೆ ನನ್ನ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು.ಮನು ನೀನು ಹೋಗಿ ಒಂದು ವಾರಕ್ಕೆ ಇವಳು ಸ್ಕೂಟಿಯಲ್ಲಿ ಹೋಗುವಾಗ ಲಾರಿಗೆ ಢಿಕ್ಕಿ ಹೊಡೆದಿದ್ದಕ್ಕೆ ತಲೆಗೆ ಸರಿಯಾಗಿ ಪೆಟ್ಟು ತಗಲಿತ್ತು ಆಸ್ಪತ್ರೆಗೆ ಸೇರಿಸಿದಾಗ ಬದುಕುವುದೇ ಕಷ್ಟ ಅಂದಿದ್ದರು ಡಾಕ್ಟರ್. ದೇವರ ದಯೆಯಿಂದ ಬದುಕುವುಳಿದಳು ಆದರೆ ನೆನಪಿನ ಶಕ್ತಿ ಮಾತ್ರ ಕಳೆದುಕೊಂಡಿದ್ದಳು ಯಾರನ್ನು ಗುರುತಿಸುತ್ತಿರಲಿಲ್ಲ ಮೌನವಾಗಿ ಇರುತ್ತಿದ್ದಳು.ಈ ವಿಷಯ ಗೊತ್ತಾದ ಕೂಡಲೆ ವರನ ಕಡೆಯವರು ಈ ಮದುವೆ ಬೇಡ ಅಂತ ಹೇಳಿದರು.
   ಹಾಸಿನಿಯ ತಾಯಿ ಶಾರದಕ್ಕ ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಅವರ ನೋವಿನ ಮೊರೆ ದೇವರಿಗೆ ತಲುಪಿತು ಅಂತ ಕಾಣುತ್ತೆ ಈಗ ೨ ತಿಂಗಳ ಹಿಂದೆ ಹಾಸಿನಿಗೆ ಹಳೆಯ ನೆನಪುಗಳೆಲ್ಲಾ ಬಂದುಬಿಟ್ಟಿದೆ.ಆದರೂ ಮೊದಲಿನ ತರ ಇಲ್ಲ.ಮೌನಿಯಾಗಿರುತ್ತೆ ಕಣೋ.ನನ್ನ ಹತ್ತೀರ ಕೇಳುತ್ತಿದ್ದಳು ಮನು ಯಾವಾಗ ಬರುತ್ತಾನೆ ಅಂತ ನೀನು  ಆ ಕಡೆ ಹೋದರೆ ಆ ಹುಡುಗಿಯನ್ನು ಮಾತನಾಡಿಸಿಕೊಂಡು ಬಾ ಅಂತ ಹೇಳಿ ಅಡುಗೆಮನೆ ಕಡೆ ಹೋದಳು.ಹಾಸಿನಿಗೆ ಮದುವೆಯಾಗಿಲ್ಲ ಅಂದಾಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ.ದೇವರು ನನ್ನ ಪ್ರೀತಿಗೆ ಮೋಸಮಾಡಲಿಲ್ಲ ಅಂದುಕೊಂಡು ಅವಳನ್ನು ಮಾತನಾಡಿಸಲ್ಲಿಕ್ಕೆ ಹೊರಟು ಬಂದೆ..
   ಪುಸ್ತಕ ಒದುತ್ತ ಕುಳಿತಿದ್ದಳು ನೋಡಿದಾಗ ಮನಸ್ಸಿಗೆ ಆದ ಆನಂದ ಹೇಳಲ್ಲಿಕ್ಕೆ ಆಗುವುದಿಲ್ಲ ಅಷ್ಟು ಖುಷಿಯಾಗಿತ್ತು. ಹಾಸಿನಿ ನನ್ನನ್ನು ನೋಡಿದಾಗ ಖುಷಿಯಿಂದ ಹಾಯ್ ಮನು ಯಾವಾಗ ಬಂದೆ ನಮ್ಮನೆಲ್ಲಾ ಮರೆತುಬಿಟ್ಟಿದ್ದಿಯಾ ಅಂದುಕೊಂಡಿದ್ದೆ ಅಂದಳು ನಾನು ಅಯ್ಯೋ ಊರು ಮತ್ತೆ ನಿಮ್ಮನೇಲ್ಲಾ ಹೇಗೆ ಮರೆಯಲಿ,ನಾನು ಯಾರನ್ನು ಮರೆತಿಲ್ಲ ಅಂದೆ ಅದಕ್ಕವಳು ತುಂಬಾ ಖುಷಿಪಟ್ಟಿದ್ದು ಅವಳ ಮುಖದಲ್ಲಿ ಕಾಣುತ್ತಿತ್ತು ಮತ್ತೆ ಕೇಳಿದೆ ನಿನ್ನ ಆರೋಗ್ಯ ಹೇಗಿದೆ ಅದಕ್ಕೆ ಅವಳು ನಾನು ಚೆನ್ನಾಗಿದ್ದೀನಿ, ಈವಾಗಂತೂ ಯಾವಾಗಲೂ ಖಾಲಿ ಇರುತ್ತೇನೆ ಪುಸ್ತಕ ಒದುತ್ತ ಇರುತ್ತಿನಿ ಅಂದಾಗ ಹಾಸಿನಿಯ ತಾಯಿ ಶಾರದಕ್ಕ ಬಂದು ವಿಚಾರಿಸಿದರು ನನ್ನ ಮದುವೆಯ ಬಗ್ಗೆ ಕೇಳಿದರು ಇಲ್ಲಾ ಶಾರದಕ್ಕ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ" ಅಂದಾಗ ನಿನ್ನ ಗೆಳೆಯರೆಲ್ಲಾ ಮದುವೆ ಮಾಡಿಕೊಂಡರು ನೀನು ಮದುವೆಯಾಗು ಮನು ಅಂದಳು ಹಾಸಿನಿ.ಆಯ್ತು ನೋಡುತ್ತೀನಿ ನಾಳೆ ಮತ್ತೆ ಬರುತ್ತೀನಿ ಅಂತ ಹೇಳಿ ಮನೆಗೆ ಬಂದುಬಿಟ್ಟೆ ಬರುವಾಗ ಒಂದು ನಿರ್ಧಾರ ಮಾಡಿಕೊಂಡೆ ಬಂದಿದ್ದೆ.
  ರಾತ್ರಿ ಮಲಗುವಾಗ ಅಮ್ಮನ ಹತ್ತಿರ ನಾನು ಒಂದು ಹುಡುಗಿ ನೋಡಿದ್ದೇನೆ ಅವಳನ್ನು ಮದುವೆಯಾಗುತ್ತೇನೆ ನೀನು ಅವಳನ್ನು ಅವರ ಮನೆಯವರನ್ನು ಒಪ್ಪಿಸಬೇಕು ಅಂದೆ ಅದಕ್ಕೆ ಅಮ್ಮ ಖುಷಿಯಿಂದ ಆಯ್ತು ಮಾರಾಯ ನೀನು ಮದುವೆಗೆ ಒಪ್ಪಿಕೊಂಡಿದ್ದೆ ಪುಣ್ಯ ಯಾರು ಹುಡುಗಿ ಅಂದಾಗ "ಹಾಸಿನಿ" ಅಂದೆ ಅಮ್ಮ ನನ್ನನ್ನು ಆಶ್ಚರ್ಯದಿಂದ ನೋಡಿ ತಮಾಷೆ ಮಾಡುತ್ತಿದ್ದಿಯಾ ನಿಜ ಹೇಳುತ್ತಿದ್ದಿಯಾ ಮನು, ಇಲ್ಲಮ್ಮಾ ನಾನು ಅವಳನ್ನು ಮದುವೆಯಾಗುವುದು ನಿನಗೆ ಇಷ್ಟವಿಲ್ವಾ ಇಲ್ಲ ಅಂದರೆ ಹೇಳು ಬೇರೆ ಹುಡುಗಿಯನ್ನು ನೋಡು.ಇಲ್ಲಪ್ಪಾ ಅಂಥ ಒಳ್ಳೆಯ ಹುಡುಗಿ ಸೊಸೆ ಆಗಿಬರುವುದು ನನ್ನ ಪುಣ್ಯ ಕಣೋ, ನಿನ್ನ ಇಷ್ಟನೇ ನನ್ನ ಇಷ್ಟ ಮನು ನಾನು ಇಷ್ಟು ದಿನ ಅದರ ಬಗ್ಗೆ ಆಲೋಚನೆ ಮಾಡಿಲ್ಲ ಅದಕ್ಕೆ ಹೇಳಿದೆ.ನಾಳೆ ಅಪ್ಪಯ್ಯನ ಹತ್ತಿರ ಹಾಸಿನಿಯ ತಂದೆಯ ಹತ್ತಿರ ಮಾತನಾಡಲ್ಲಿಕ್ಕೆ ಹೇಳುತ್ತೀನಿ ಈವಾಗ ನಿದ್ರೆ ಮಾಡು ಅಂತ ಹೇಳಿ ಹೋದಳು.ಅಮ್ಮ ಹಾಸಿನಿಯನ್ನು ಒಪ್ಪಿಕೊಂಡಿದ್ದಕ್ಕೆ ಮದುವೆಯಾದಷ್ಟೇ ಖುಷಿಯಾಗಿತ್ತು ನನಗೆ.ಆದರೆ ಹಾಸಿನಿ ನನ್ನ ಮದುವೆಯಾಗಲ್ಲಿಕ್ಕೆ ಒಪ್ಪುತ್ತಾಳೊ ಇಲ್ಲವೋ ಅನ್ನುವ ಭಯಕಾಡುತ್ತಿತ್ತು.
 ಹಾಸಿನಿಯ ತಂದೆ-ತಾಯಿ ನಮ್ಮ ತಂದೆ-ತಾಯಿ ಹಾಸಿನಿಯ ಹತ್ತಿರ ಮದುವೆಯ ವಿಷಯ ಮಾತನಾಡಿದ್ದರು.ಅವಳು ನಿಮ್ಮ ಇಷ್ಟನೇ ನನ್ನ ಇಷ್ಟ ಅಂತ ಒಪ್ಪಿಗೆ ಕೊಟ್ಟಳು. ಅಂತೂ ನನ್ನ ೩ ವರ್ಷದ ಕನಸು ಹಾಸಿನಿಯ ಜೊತೆ ಮದುವೆಯೊಂದಿಗೆ ನನಸಾಗಿತ್ತು.ಪ್ರಥಮ ರಾತ್ರಿಯಲ್ಲಿ ಹಾಸಿನಿ ನನ್ನ ಹತ್ತಿರ ಬಂದು "ರೀ ನಿಮಗೆ ಒಂದು ವಿಷಯ ಹೇಳುತ್ತೀನಿ ಅಂದಳು ಏನು ವಿಷಯ ಹೇಳು ಅಂದೆ ಅದಕ್ಕೆ ನಾನು ನಿಮ್ಮನ್ನು ೩ ವರ್ಷಗಳಿಂದ ಇಷ್ಟಪಟ್ಟಿದ್ದೆ ಅಂದಾಗ ನನಗೆ ಆಶ್ಚರ್ಯವಾಗಿತ್ತು ಮತ್ತೆ ಯಾಕೆ ನನಗೆ ಮೊದಲೆ ಹೇಳಲಿಲ್ಲ ಹಾಸಿನಿ ಅಂದೆ ಅದಕ್ಕೆ ಅವಳು ನಾನು ಹುಡುಗಿ ನಿಮ್ಮನ್ನು ಪ್ರೀತಿಸುತ್ತೇನೆ ಅಂತ ಹೇಗೆ ಹೇಳುವುದು ಅದು ಅಲ್ಲದೆ ಮನೆ ಹತ್ತಿರದ ಹುಡುಗ ನೀವು ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುತ್ತೀರಾ ಅಂತ ಭಯದಿಂದ ಹೇಳಲಿಲ್ಲ.ದೇವರು ದೊಡ್ಡವನು ನಾನು ಇಷ್ಟಪಟ್ಟ ಹುಡುಗನೇ ನನಗೆ ಗಂಡನಾಗಿ ಕೊಟ್ಟಿದ್ದಾನೆ ಅಂದಳು.ನನಗೂ ಸಹ ನಾನು ಪ್ರೀತಿಸಿದ ಹುಡುಗಿನೇ ಹೆಂಡತಿಯಾಗಿ ದೊರಕಿದಳು.ಅದಕ್ಕೆ ಇರಬೇಕು ಹಿರಿಯವರು ಹೇಳಿದ್ದು "ಮದುವೆ"ಅನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತ ನನ್ನ ಪಾಲಿಗೆ ಅದು ನಿಜವಾಯಿತು..


ಎನ್.ರಾಜೇಶ್.ಕುಮಾರ್.ನೇರಳಕಟ್ಟೆ

Tuesday, 1 January 2013

"ಟೈಮ್"

                                    
 ಹಾಯ್ ಸ್ವೀಟಿ ಐ ಲವ್ ಯೂ" ಅಂತ ಮೊಬೈಲ್ ಸದ್ದು ಮಾಡಿತು ಯಾರು ಮೇಸೆಜ್ ಮಾಡಿದ್ದು ಅಂತ ಮೊಬೈಲ್ ನೋಡಿದೆ ನಾನು ಯಾವುದೋ ಹೊಸ ನಂಬರನಿಂದ "ಕಾಲ್ ಮಿ" ಅಂತ ಬಂದಿತ್ತು.ನನಗೆ ಯಾರು ಮೆಸೇಜ್ ಮಾಡಿದ್ದು ಅಂತ ತಿಳಿದುಕೊಳ್ಳಲ್ಲಿಕ್ಕೆ ಆ ನಂಬರಿಗೆ ಫೋನ್ ಮಾಡಿದೆ " ಹಲೋ ಅಂತು ಆ ಕಡೆಯಿಂದ ಕೋಗಿಲೆಯ ಕಂಠದಂತೆ ಇರುವ ಹುಡುಗಿಯ ಧ್ವನಿ.ನಾನು ಯಾರು ನೀವು ಯಾಕೆ ಮೇಸೆಜ್ ಮಾಡಿದ್ದು ಅಂತ ಕೇಳಿದೆ ಅದಕ್ಕೆ ಅವಳು ಐ ಯಾಮ್ ಸಾರಿ ನನ್ನ ಅಣ್ಣನಿಗೆ ಮಾಡಲ್ಲಿಕ್ಕೆ ಹೋಗಿ ನಿಮಗೆ ಮಾಡಿದೆ ತಪ್ಪಾಯ್ತು ಅಂದಳು.ಹೌದಾ ಆಯ್ತು ಬಿಡಿ ಅಂತ ಕಟ್ಟಮಾಡಿದೆ.ಆದರೆ ಅವಳ ಸ್ವರ ಮಾತ್ರ ಕಿವಿಯಲ್ಲಿ ಗುಯ್ ಗುಡುತ್ತಿತ್ತು.ಎಷ್ಟು ಮಧುರವಾಗಿದೆ ಅವಳ ಧ್ವನಿ ಇನ್ನು ಅವಳ ಸೌಂದರ್ಯ ಹೇಗಿರಬಹುದು ಅಂತ ಆಲೋಚಿಸುತ್ತಿರವಾಗಲೇ ಮೊಬೈಲ್ ಮತ್ತೆ ಸದ್ದು ಮಾಡಿತು ನೋಡಿದಾಗ ಅದೇ ನಂಬರಿನಿಂದ "ಥ್ಯಾಂಕ್ಸ್"ಅಂತ ಬರೆದಿತ್ತು.ನನಗೆ ತುಂಬಾ ಖುಷಿಯಾಯಿತು ಅವಳು ಪುನಃ ಮೇಸೆಜ್ ಮಾಡಿದ್ದಕ್ಕೆ.ನಾನು ಪುನಃ ಮೇಸೆಜ್ ಮಾಡಿ ಇಟ್ಸ್ ಒ.ಕೆ.ಅಂದೆ. ಅದಾದ ನಂತರ ದಿನ ಒಂದೊಂದು ಮೇಸೆಜ್ ಮಾಡುತ್ತಿದ್ದಳು ನಾನು ಅದಕ್ಕೆ ಉತ್ತರಿಸುತ್ತಿದ್ದೆ ಆಮೇಲೆ ಒಂದು ದಿನ ನನ್ನ ಫ್ರೆಂಡ್ ಮಾಡಿಕೊಳ್ಳುತ್ತೀರಾ ಅಂತ ಕೇಳಿದೆ.ಅವಳು ಆಯ್ತು ನಿಮ್ಮ ಹೆಸರೇನು ಅಂತ ಕೇಳಿದಳು ನಾನು ವಿನಯ್ ಅಂದೆ ಹಾಗೆ ಅವಳ ಹೆಸರು ಕೇಳಿದ್ದಕ್ಕೆ ಸ್ಮಿತಾ ಅಂದಳು.ಮುಖ ನೋಡದೆ ಗೆಳೆತನ ಶುರುಮಾಡಿದೆ.
  ನನ್ನ ಹೆಸರು ವಿನಯ್ ಅಂತ ಎಲ್ಲರೂ ವಿನು ಅಂತಾರೆ.ಕಷ್ಟಪಟ್ಟು ಓದಿದ್ದಕ್ಕೆ ಖಾಸಗಿ ಕಂಪೆನಿಯಲ್ಲಿ ಕೆಲಸ ಸಿಕ್ಕಿತ್ತು.ಅದು ಬೆಂಗಳೂರು ಎಂಬ ಮಾಯಾನಗರಿಯಲ್ಲಿ.ಮನೆಯಲ್ಲಿ ಅಷ್ಟು ದೂರ ಹೋಗುವುದು ಬೇಡ ಅಂದರೂ ಕೇಳದೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದ್ದೆ ರೂಮ್ ಮಾಡಿಕೊಂಡು ಒಂಟಿಯಾಗಿದ್ದೆ.ಕಂಪೆನಿಯ ಕೆಲಸಗಾರರು ಬಿಟ್ಟರೆ ಬೇರೆ ಯಾರು ಗೆಳೆತನವಿಲ್ಲದ ನನಗೆ ಹುಡುಗಿಯೊಬ್ಬಳು ಫೋನ್ ಗೆಳತಿ ಆಗಿ ಸಿಕ್ಕಿದ್ದು ತುಂಬಾ ಖುಷಿಯಾಗಿತ್ತು.ಯಾವಾಗಲೂ ಅವಳಿಗೆ ಮೇಸೆಜ್ ಮಾಡುವುದರಲ್ಲೇ ಸಮಯ ಕಳೆಯುತ್ತಿದ್ದೆ.
 ಗೆಳೆತನ ಶುರುವಾಗಿ ಅದಾಗಲೇ ಒಂದುವಾರ ಕಳೆದಿತ್ತು. ನನಗೆ ಅವಳನ್ನು ನೋಡಬೇಕು ಅನ್ನಿಸುತ್ತಿತ್ತು.ಕೇಳಲ್ಲಿಕ್ಕೆ ಧೈರ್ಯವಿಲ್ಲದೆ ಸುಮ್ಮನಾಗಿದ್ದೆ..ಒಂದುದಿನ ಧೈರ್ಯ ಮಾಡಿ ನಿಮ್ಮನ್ನು ನೋಡಬೇಕು ಸ್ಮಿತಾರವರೆ ಅಂದಾಗ ಯಾಕೆ ಅಂತ ಕೇಳಿದಳು ನಾನು ಸುಮ್ಮನೆ ಕೂತೂಹಲಕ್ಕೆ ಅಂದೆ.ಆಯ್ತು ನಿಮಗೆ ಯಾವಾಗ ರಜೆ ಇರುತ್ತೆ ಅಂತ ಕೇಳಿದಳು ಸಂಡೆ ಅಂದಿದ್ದಕ್ಕೆ ನನಗೂ ಅವತ್ತು ರಜೆ ಎಲ್ಲಿ ಸಿಗುತ್ತೀರಾ ಅಂತ ಕೇಳಿದಳು.ನಾನು ನೀವೆ ಹೇಳಿ ಅಂದೆ.ಅದಕ್ಕೆ ಅವಳು ಸಂಡೆ ಬೆಳ್ಳಿಗ್ಗೆ ೯ ಗಂಟೆಗೆ ಕಬ್ಬನ್ ಪಾರ್ಕ್ ಹತ್ತಿರ ಒಬ್ಬರೆ ಬನ್ನಿ ಅಂದಳು.ನಾನು ನಿಮ್ಮನ್ನು ಗುರುತು ಹಿಡಿಯುವುದು ಹೇಗೆ ಅಂದಿದ್ದಕ್ಕೆ ನೀವು ಬ್ಯಾಕ್ ಪ್ಯಾಂಟ್ ಬ್ಲೂ ಟಿ_ಶರ್ಟ್ ಹಾಕಿಕೊಂಡು ಬನ್ನಿ ನಾನು ಗುರುತು ಹಿಡಿಯುತ್ತೇನೆ ಅಂದಳು.ನಾನು ಬರುತ್ತೀನಿ ಮಿಸ್ ಮಾಡಬಾರದು ಅಂದಿದ್ದಕ್ಕೆ ನಾನು ಬರುತ್ತೇನೆ ನೀವು ಮಿಸ್ ಮಾಡದಿದ್ದರೆ ಸಾಕು ಅಂದಳು.
 ಭಾನುವಾರ ಯಾವಾಗ ಬರುತ್ತೇ ಅಂತ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ.ಬೆಳಿಗ್ಗೆ ಆದರೆ, ಅವಳನ್ನು ಮೀಟ್ ಮಾಡುತ್ತೀನಿ ಅನ್ನುವ ಖುಷಿ ನನಗೆ. ರಾತ್ರಿ ಮನೆಯಿಂದ ಅಮ್ಮ ಫೋನ್ ಮಾಡಿದ್ದಳು.ಕೆಲಸದ ಬಗ್ಗೆ, ನನ್ನ ಬಗ್ಗೆ ವಿಚಾರಿಸಿದಳು ನಾನು ಅಪ್ಪಿತಪ್ಪಿಯೂ ಆ ಹುಡುಗಿಯ ವಿಷಯ ಹೇಳಲಿಲ್ಲ.ಅಪ್ಪನು ಮಾತನಾಡಿದರು.ಅಮ್ಮ ತುಂಬಾ ಅದು ಇದು ಅಂತ ಮಾತನಾಡಿ ಹುಷಾರ್ ಆಗಿರು ಫೋನ್ ಇಟ್ಟರು.ನನಗೆ ಬೆಳಿಗ್ಗೆ ಆದರೆ ಸಾಕಿತ್ತು.
   ಬೆಳ್ಳಗ್ಗೆ ಎದ್ದು ಗಂಟೆ ಎಷ್ಟಾಯ್ತು ಅಂತ ಮೊಬೈಲ್ ನೋಡಿದಾಗ ರಾತ್ರಿ ಜಾಸ್ತಿ ಮಾತನಾಡಿದ್ದರಿಂದ ಮೊಬೈಲ್ ಸ್ವಿಚ್ ಆಫ್ ಆಗಿತ್ತು.ಮೇಜಿನ ಮೇಲೆ ಅಪ್ಪ ಪ್ರೀತಿಯಿಂದ ಕೊಟ್ಟಿದ್ದ ವಾಚಿತ್ತು.ಟೈಮ್ ನೋಡಿದಾಗ ೭ ಗಂಟೆ ತೋರಿಸುತ್ತಿತ್ತು.ಮೊಬೈಲ್ ಚಾರ್ಜಗೆ ಹಾಕಿಬಿಟ್ಟು ಇನ್ನು ಸಮಯವಿದೆ ಅಂತ ಅಂದುಕೊಂಡು ಅಲ್ಲೆ ಮಲಗಿದೆ ಜೋರು ನಿದ್ರೆ ಬಂದಿತ್ತು ಫಟ್ ಅಂತ ಎಚ್ಚರಿಕೆ ಆಯ್ತು.ಟೈಮ್ ನೋಡಿದರೆ 7 ಗಂಟೆನೇ ತೋರಿಸುತ್ತಿತ್ತು.ತುಂಬಾ ದಿನಗಳಿಂದ ಕೀಲಿ(ಕೀ) ಕೊಡದೆ ಇರುವುದರಿಂದ ವಾಚ್ ನಿಂತಿತ್ತು ಅಂತ ಅವಾಗ ಗೊತ್ತಾಯಿತು.ಮೊಬೈಲ್ ಆನ್ ಮಾಡಿ ಗಂಟೆ ನೋಡಿದಾಗ 11 ಗಂಟೆ ಆಗಿತ್ತು. ಅವಳಿಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಅಂತ ಹೇಳಿತು ಸಿಟ್ಟು ಮಾಡಿಕೊಂಡಿರಬೇಕು ಅಂತ ಅಂದುಕೊಂಡೆ.ಅಪ್ಪ ಕೊಟ್ಟಿದ್ದ ವಾಚಿನ ಮೇಲೆ ಇನ್ನಿಲದಷ್ಟು ಸಿಟ್ಟು ಬಂದಿತ್ತು.ಎಲ್ಲಾ ಈ ವಾಚಿನಿಂದ ಆಗಿದ್ದು ಒಳ್ಳೆಯ ಗೆಳತಿಯನ್ನು ಕಳೆದುಕೊಂಡೆ ಅಂತ ಸಿಟ್ಟಿನಿಂದ ರೂಮಿನ ಮೂಲೆಗೆ ಬಿಸಾಡಿದೆ.ಅಪ್ಪ ಬೆಂಗಳೂರಿಗೆ ಬರುವಾಗ ಪ್ರೀತಿಯಿಂದ ಕೊಟ್ಟಿದ್ದ ವಾಚ್ ಅದು.ಹಳೆಯ ಕಾಲದ ಕೀಲಿಕೊಡುವ ವಾಚ್ ಆದ್ದರಿಂದ ನಾನು ಕಟ್ಟಿಕೊಳ್ಳುತ್ತಿರಲಿಲ್ಲ.ಈ ತರ ತೊಂದರೆ ನೀಡುತ್ತೆ ಅಂದುಕೊಂಡಿರಲಿಲ್ಲ ನಾನು.
 ಅದಾದ ನಂತರ ಆ ನಂಬರಿಗೆ ಅದೆಷ್ಟೇ ಸಲ ಫೋನ್ ಮಾಡಿದರು ಸ್ವಿಚ್ ಆಫ್ ಅಂತಾನೆ ಹೇಳುತ್ತಿತ್ತು.ಅವಳಿಗೆ ಬೇಜಾರಾಗಿ ನಂಬರ್ ಬದಲಾಯಿಸಿರಬೇಕು ಅಂದುಕೊಂಡು ಸುಮ್ಮನಾದೆ.ಆ ವಿಷಯ ಮರೆತುಬಿಟ್ಟಿದ್ದೆ.ರಜೆದಿನ ರೂಮಿನಲ್ಲಿ ಕುಳಿತುಕೊಂಡು ಟಿವಿ 9 ನೊಡುತ್ತಿದ್ದೆ.ಅದರಲ್ಲಿ ಒಂದು ಪ್ರೋಗ್ರಾಮ್ ಬರುತ್ತಿತ್ತು."ಹುಡುಗಿಯರ ಧ್ವನಿಗೆ ಮೋಸಹೋದ ಹುಡುಗರು"ಅಂತ. ಆರ್ಕುಟ್,ಫೇಸಬುಕ್ ನಲ್ಲಿರುವ ಹುಡುಗರ ಮೊಬೈಲ್ ನಂಬರ್ ತೆಗೆದುಕೊಂಡು ಹುಡುಗಿಯರ ಧ್ವನಿಯಲ್ಲಿ ಮಾತನಾಡಿ ಗೆಳೆತನ ಮಾಡಿಕೊಂಡು ಹುಡುಗರನ್ನು ಕರೆಸಿಕೊಂಡು ಅವರಲ್ಲಿರುವ ಮೊಬೈಲ್ ಹಣ,ಚಿನ್ನವನ್ನು ದೋಚುತ್ತಾರೆ ಅನ್ನುವ ಸುದ್ದಿ ಬರುತ್ತಿತ್ತು.ಮೋಸ ಹೋದ ಹುಡುಗರು ಮಾತನಾಡುತ್ತಿದ್ದರು ನನಗೆ ಭಯವಾಯಿತು ನನಗೆ ಫೋನ ಮಾಡಿ ಮಾತನಾಡಿದವಳು ಈ ಗುಂಪಿಗೆ ಸೇರಿದವಳಲ್ಲ ಅನ್ನುತ್ತಿರುವಾಗಲೇ ಮೊಬೈಲ್ ನಂಬರ್ ಕೊಡುತ್ತಿದ್ದರು ಅದರಲ್ಲಿ ನನಗೆ ಫೋನ್ ಬರುತ್ತಿದ್ದ ನಂಬರ್ ಸಹ ಇತ್ತು. ಹೃದಯ ಒಂದು ಸಲ ನಿಂತ ಹಾಗೆ ಆಯಿತು.ಎಷ್ಟು ಮೋಸ ಹೋದೆ ನಾನು ಹುಡುಗಿಯ ಸ್ವರ ಕೇಳಿ ಮೋಸ ಹೋಗಿದ್ದ ನನಗೆ ನನ್ನ ಬಗ್ಗೆ ಅಸಹ್ಯವಾಯಿತು.ಅವತ್ತು ವಾಚ್ ಸರಿಯಾಗಿ ಗಂಟೆ ತೋರಿಸಿದ್ದು ನಾನೇನಾದರೂ ಹೋಗಿದ್ದರೆ ಮೊಬೈಲ್ ಹಣ ಎಲ್ಲ ಕಳೆದುಕೊಳ್ಳುತ್ತಿದ್ದೆ ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು.ನನ್ನನ್ನು ಆ ಗಂಡಾಂತರದಿಂದ ಪಾರು ಮಾಡಿದ್ದು ಅಪ್ಪ ಕೊಟ್ಟ ವಾಚ್.ಅದಕೆಷ್ಟು ಧನ್ಯವಾದ ಹೇಳಿದರು ಸಾಲದು ಎಲ್ಲಿದೆ ಅಂತ ಹುಡುಕಿದಾಗ ರೂಮಿನ ಮೂಲೆಯಲ್ಲಿ ಬಿದ್ದಿತ್ತು.ಎತ್ತಿ ನೋಡಿದಾಗ ಗ್ಲಾಸ್ ಒಡೆದುಹೊಗಿತ್ತು.ನನ್ನ ಮಾನ ಹಣ ಕಾಪಾಡಿದ ವಾಚ್ ಗೆ  ಗ್ಲಾಸ್ ಹಾಕಿ ಕೈಗೆ ಕಟ್ಟಿಕೊಳ್ಳಲ್ಲಿಕ್ಕೆ ಶುರುಮಾಡಿದೆ..

        
                                                                -ಎನ್.ರಾಜೇಶ್.ಕುಮಾರ್.ನೇರಳಕಟ್ಟೆ.