Tuesday, 25 February 2014

"ಮಡದಿ"

 ತಲೆಯೆಲ್ಲಾ ನೋವಿನಿಂದ ಕೂಡಿದ ಅನುಭವ,ನನ್ನ ಸುತ್ತಲೂ ತುಂಬಾ ಜನ ಮಾತಾಡುತ್ತಿದ್ದಾರೆ ಅಂತ ಅನಿಸುತ್ತಿದೆ.ಈವಾಗ ಎಲ್ಲಿದ್ದೇನೆ,ಏನಾಯ್ತು ಅಂತ ನೆನಪಿಗೆ ಬರುತ್ತಿಲ್ಲ.ಅಷ್ಟರಲ್ಲಿ ಅಪ್ಪ- ಅಮ್ಮ "ಮನು" ಅಂದರು ನಾನು "ಅಮ್ಮ ನಾವೆಲ್ಲಿದ್ದೇವೆ ಏನಾಯ್ತು ನನಗೆ ತಲೆ,ಮೈಕೈಯೆಲ್ಲಾ ತುಂಬಾ ನೋವಾಗುತ್ತಿದ್ದೆ ಅಂದಾಗ ನಾವೀಗ ಆಸ್ಪತ್ರೆಯಲ್ಲಿದ್ದೇವೆ ಅಂದರು ಅಮ್ಮ.ತಕ್ಷಣವೇ ಅಪ್ಪ-ಅಮ್ಮ ನಾನು ನನ್ನ ಮಡದಿ ಹಾಸಿನಿ ದೇವರ ದರ್ಶನಕ್ಕೆ ಹೋಗಿಬರುವಾಗ ಆದ ಅಪಘಾತದ ನೆನಪಾಯಿತು ಅಷ್ಟೇ ಮುಂದೆ ಏನಾಯಿತು ಅಂತ ನೆನಪಿಲ್ಲ.ಕೂಡಲೇ ಹಾಸಿನಿ ನೆನಪಾದಳು ದುಗುಡದಿಂದಲೇ ಅಮ್ಮನನ್ನು ಕೇಳಿದೆ "ಹಾಸಿನಿ" ಹೇಗಿದ್ದಾಳೆ ಆರೋಗ್ಯವಾಗಿದ್ದಾಳೆ ಅಲ್ವಾ ಅವಳಿಗೆ ಏನು ಪೆಟ್ಟಾಗಿಲ್ಲ ತಾನೇ?."ಚೆನ್ನಾಗಿದ್ದಾಳೆ ಸ್ವಲ್ಪ ಗಾಯವಾಗಿದೆ ಪಕ್ಕದ ವಾರ್ಡಿನಲ್ಲಿ ಮಲಗಿದ್ದಾಳೆ" ಅಂದರು.ತುಸುನೆಮ್ಮದಿಗೊಂಡಿತು ಮನಸ್ಸು.ನನ್ನ ಜೀವನಕ್ಕೆ ಬೆಳಕನ್ನು ತಂದವಳು ಹಾಸಿನಿ.ಅವಳು ನನ್ನ ಜೀವನಕ್ಕೆ ಬರದೇ ಹೋಗಿದ್ದರೆ ನನ್ನ ಜೀವನದಲ್ಲಿ ಬರಿ ಕತ್ತಲೆ ತುಂಬಿಕೊಂಡಿರುತ್ತಿತ್ತು.ಅವಳು ನನ್ನ ಜೀವನದೊಳಗೆ ಬಂದದ್ದು ನೆನಪಾಗಲ್ಲಿಕ್ಕೆ ಶುರುವಾಯಿತು
 ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಕನಸುಗಳಿರುತ್ತದೆ,ಕ್ರಿಕೇಟ್ ಆಟಗಾರ,ಸಿನಿಮಾ ನಾಯಕ,ರಾಜಕಾರಣಿ,ಶ್ರೀಮಂತ,ಪತ್ರಕರ್ತ,ವಿಜ್ಞಾನಿ ಮತ್ತು ಲೇಖಕನಾಗಬೇಕೆಂಬ ಕನಸುಗಳಿರುತ್ತದೆ.ಅದಕ್ಕಾಗಿ ಪ್ರಯತ್ನಿಸಿದರೆ ಅದು ಸಾಧ್ಯವಾಗುವುದರಲ್ಲಿ ಅನುಮಾನವೇ ಇಲ್ಲ.ನನಗೆ ಇಂಥ ಕನಸುಗಳಿರಲಿಲ್ಲ ಆದರೆ ವಿಚಿತ್ರವಾದ ಕನಸೊಂದಿತ್ತು.ನಾನು ಪುಸ್ತಕಪ್ರಿಯ ಅದಕ್ಕೆ ಬಾಲ್ಯದಿಂದಲೂ ಪುಸ್ತಕವನ್ನು ಸಂಗ್ರಹಿಸಿಡುತ್ತಿದ್ದೆ.ಆದರೆ ಅಲ್ಲಿರುವ ಯಾವ ಪುಸ್ತಕಗಳನ್ನು ಓದಿರಲಿಲ್ಲ "ಓದಲ್ಲಿಕ್ಕೆ ಸಾಧ್ಯವಾಗುತ್ತಿರಲ್ಲಿಲ್ಲ ನನ್ನಿಂದ".ಎಲ್ಲಾ ಕೇಳುತ್ತಿದ್ದರು ಪುಸ್ತಕ ಓದದೇ ಇರುವವನ್ನು ಪುಸ್ತಕಗಳನ್ನು ಯಾಕೆ ತಂದು ಸಂಗ್ರಹಿಸುತ್ತಿಯಾ ಅಂತ. ನಾನು ಅದಕ್ಕೆ ಇದೆಲ್ಲ ನನ್ನ ಹೆಂಡತಿಯಾಗಿ ಬರುವವಳಿಗೆ ನನ್ನ ಉಡುಗೊರೆ. ಅವಳು ಪ್ರೀತಿಯಿಂದ ಓದಿ ನನಗೆ ಹೇಳಬೇಕು ಇದು ನನ್ನ ಜೀವನದ ಕನಸು ಅಂತ ಹೇಳುತ್ತಿದ್ದೆ.ಅವರೆಲ್ಲ ನಗಾಡಿಕೊಳ್ಳುತ್ತಿದ್ದರು ನನ್ನ ಕನಸಿನ ಬಗ್ಗೆ.
 ನನ್ನ ಬಗ್ಗೆ,ನನ್ನ ಪ್ರೀತಿಯ ಕನಸಿನ ಬಗ್ಗೆ ತಿಳಿದವರು ಯಾರು ಹೆಣ್ಣು ಕೊಡುವುದಕ್ಕೆ ಮುಂದೆ ಬರಲಿಲ್ಲ.ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.ಅಪ್ಪ-ಅಮ್ಮ ನನಗೆ ಮದುವೆ ಮಾಡಲೇಬೇಕು ಅಂತ ತುಂಬಾ ಹುಡುಕಾಡಿ ಕೊನೆಗೂ ಒಬ್ಬಳನ್ನು ಹುಡುಕಿದರು ಅವಳೇ ಹಾಸಿನಿ. ನಾನು ಅಮ್ಮನ ಹತ್ತಿರ ಹೇಳಿದೆ ಆ ಹುಡುಗಿಯ ಜೊತೆ ಮಾತನಾಡಬೇಕು ಅಂದಾಗ ಅಮ್ಮ ಒಪ್ಪಿಗೆ ಕೊಟ್ಟು ಮರುದಿನ ಹಾಸಿನಿ ಬಂದಳು.ಅಮ್ಮ ನನ್ನ ಜೊತೆಯಲ್ಲಿಯೇ ಕುಳಿತುಕೊಂಡಿದ್ದರು.ನಾನು ನಿಮ್ಮ ಹೆಸರೇನು? ಏನು ಮಾಡಿಕೊಂಡಿದ್ದೀರಾ?.ಅದಕ್ಕೆ ಹಾಸಿನಿ ನಗುತ್ತ "ನನ್ನ ಹೆಸರು ಹಾಸಿನಿ ನಾನು ಕುರುಡರ ಅನಾಥಾಶ್ರಮದಲ್ಲಿ ಕುರುಡು ಮಕ್ಕಳಿಗೆ ಪಾಠ ಹೇಳಿಕೊಡುವ ಟೀಚರ್ ಕೆಲಸ ಮಾಡುತ್ತಿದ್ದೇನೆ" ನಾನು "ಅಪ್ಪ-ಅಮ್ಮ ಏನು ಮಾಡುತ್ತಾರೆ?" ಅವಳು "ನನಗೆ ಅಪ್ಪ-ಅಮ್ಮ ಯಾರು ಇಲ್ಲ ನಾನು ಅದೇ ಅನಾಥಾಶ್ರಮದಲ್ಲಿ ಬೆಳೆದವಳು ಈವಾಗ ಅಲ್ಲಿಯೇ ಇದ್ದೇನೆ" ಅಂದಳು ನಾನು ಸಾರಿ ಕೇಳಿದೆ ನಂತರ "ನನ್ನ ಬಗ್ಗೆ ಪೂರ್ತಿ ತಿಳಿದುಕೊಂಡಿದ್ದೀರಾ ತಾನೇ ನಮ್ಮ ಅಪ್ಪ-ಅಮ್ಮನ ಒತ್ತಾಯಕ್ಕೆ ಅಥವಾ ಅನುಕಂಪಕ್ಕೊ ನನ್ನನ್ನು ಮದುವೆಯಾಗುತ್ತೀನಿ ಅಂದರೆ ನಾನು ಇದಕ್ಕೆ ಒಪ್ಪುದಿಲ್ಲ ಅಂದೆ.ಅದಕ್ಕವಳು ನಾನು ಯಾರ ಒತ್ತಾಯಕ್ಕೆ ಮಣಿದಿಲ್ಲ. ನಿಮ್ಮಂಥವರನ್ನು ಮದುವೆಯಾಗುವುದು ನನ್ನ ಅದೃಷ್ಟ ನಾನು ಮನಸಾರೆ ನಿಮ್ಮನ್ನು ಮದುವೆಯಾಗುವುದಕ್ಕೆ ಒಪ್ಪಿದ್ದೇನೆ ನೀವು ಒಪ್ಪಿದರೆ ನಿಮ್ಮ ಕಣ್ಣಾಗಿರುತ್ತೇನೆ ಅಂದಾಗ ನನಗೆ ತುಂಬಾ ಖುಷಿಯಾಯಿತು.ನಾನು ಒಪ್ಪಿಗೆಕೊಟ್ಟೆ ಸರಳ ರೀತಿಯಲ್ಲಿ ನಮ್ಮಿಬ್ಬರ ವಿವಾಹ ಜರುಗಿತು.
 ನಾನು ಅಂದುಕೊಂಡಿದ್ದಕ್ಕಿಂತಲೂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು ನನ್ನ ಮುದ್ದು ಮಡದಿ.ನಾನು ಅವಳು ಬಂದಮೇಲೆ ನಾನು ಅಪ್ಪ-ಅಮ್ಮ ತುಂಬಾ ಸಂತೋಷವಾಗಿದ್ದೇವು.ನಮ್ಮ ಸುಖಸಂಸಾರ ನೋಡಿ ದೇವರಿಗೆ ಅಸೂಯೆ ಉಂಟಾಯಿತು ಅನಿಸುತ್ತದೆ.ಮದುವೆಯಾದ ಮೇಲೆ ಪ್ರಥಮಬಾರಿಗೆ ದೇವಸ್ಥಾನಕ್ಕೆ ಹೋಗಲು ನಿರ್ಧರಿಸಿ ಹೋಗಿದ್ದೇವು ಹೋಗಿ ಬರುವಾಗ ಆಗಿರುವುದು ಅಪಘಾತ.ಕೂಡಲೇ ವಾಸ್ತವಕ್ಕೆ ಬಂದೆ ಅಪ್ಪ ಮತ್ತು ಡಾಕ್ಟರ್ ಮಾತನಾಡುತ್ತಿದ್ದರು.ಅದಾದ ಒಂದು ವಾರ ಕೂಡ ಹಾಸಿನಿಯನ್ನು ಮಾತನಾಡಿಸಲ್ಲಿಕ್ಕೆ ಆಗಲಿಲ್ಲ.ಅಪ್ಪ-ಅಮ್ಮ ನನ್ನಿಂದ ಏನೋ ಮುಚ್ಚಿಡುತ್ತಾರೆ ಅನಿಸಲ್ಲಿಕ್ಕೆ ಶುರುವಾಯಿತು.
 ಡಾಕ್ಟರ್ ಬಂದು ಕಣ್ಣಿಗೆ,ತಲೆಗೆ ಸುತ್ತಿದ ಬ್ಯಾಂಡೇಜ್ ಬಿಚ್ಚುವುದಕ್ಕೆ ಶುರುಮಾಡಿದರು.ಡಾಕ್ಟರ್ ಮನು ನಿಧಾನವಾಗಿ ಕಣ್ಣು ತೆರೆಯಿರಿ ಅಂದರು ನನಗೆ ಆಶ್ಚರ್ಯವಾಯಿತು ಆದರೂ ಧೈರ್ಯಮಾಡಿ ಕಣ್ಣುತೆರೆದು ನೋಡಿದರೆ ವಯಸ್ಸಾದ ದಂಪತಿಗಳು ಪಕ್ಕದಲ್ಲಿ ಡಾಕ್ಟರ್ ಇದ್ದರು.ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಹುಟ್ಟುಕುರುಡನಾದ ನನಗೆ ಮೊದಲಬಾರಿಗೆ ದೃಷ್ಟಿ ಬಂದಿತ್ತು ಯಾರು ನನಗೆ ಕಣ್ಣು ದಾನ ಮಾಡಿದರೋ ಗೊತ್ತಿಲ್ಲ.ಕಣ್ಣು ಕೊಟ್ಟವರಿಗೆ ಮನಸ್ಸಿನಲ್ಲಿಯೇ ವಂದಿಸಿದೆ.ಅಲ್ಲಿ ನಿಂತಿರುವವರೇ ನನ್ನ ತಂದೆ-ತಾಯಿ ಅಂತ ಗೊತ್ತಾಯಿತು.ಅಪ್ಪ-ಅಮ್ಮನನ್ನು ಕಣ್ಣುತುಂಬಾ ನೋಡಿದೆ.ಅಮ್ಮ ಹಾಸಿನಿಯನ್ನು ನೋಡಬೇಕು ಏಲ್ಲಿದ್ದಾಳೆ ಅಂತ ಕೇಳಿದೆ.ಅಮ್ಮ ಅಳುವುದಕ್ಕೆ ಶುರುಮಾಡಿದಳು.ಅವಾಗ ಡಾಕ್ಟರ್ "ಮನು ಸ್ವಲ್ಪ ಧೈರ್ಯ ತಂದುಕೊಳ್ಳಿ ನಿಮ್ಮ ಕಾರಿಗೆ ಅಪಘಾತದಲ್ಲಿ ನಿಮ್ಮ ಪತ್ನಿ ಅಸುನೀಗಿದ್ದಾರೆ ಅವರ ಎರಡು ಕಣ್ಣನ್ನು ನಿಮಗೆ ಹಾಕಿದ್ದೇವೆ ಅಂದರು.ನನಗೆ ಆ ಮಾತು ಕೇಳಿದ ಕೂಡಲೇ ಆ ಕ್ಷಣವೇ ನಾನು ಸತ್ತುಹೋಗಿದ್ದರೆ ಖುಷಿಯಾಗುತ್ತಿದ್ದೆ .ಕಣ್ಣು ಬಂದು ಖುಷಿಗಿಂತ ನನ್ನ ಮುದ್ದುಮಡದಿ ನನ್ನನ್ನು ಒಂಟಿಯಾಗಿ ಬಿಟ್ಟುಹೋಗಿದ್ದು ನನಗೆ ತಡೆಯಲಾರದ ನೋವು ಕೊಟ್ಟಿತ್ತು.
 ಹುಟ್ಟುಕುರುಡನಾದ ನನ್ನನ್ನು ಮದುವೆಯಾಗಿ ನನಗೆ ಖುಷಿಕೊಟ್ಟವಳು.ನಿಮಗೆ ಬಾಳಿನುದ್ದಕ್ಕೂ ಕಣ್ಣಾಗಿರುತ್ತೇನೆ ಅಂತ ಹೇಳಿದವಳು ಕೊನೆಗೂ ತನ್ನ ಕಣ್ಣನ್ನು ನನಗೆ ನೀಡಿ ಅವಳ ಮಾತನ್ನು ಉಳಿಸಿಕೊಂಡಿದ್ದಳು.ಕೊನೆಯ ಬಾರಿ ಅವಳ ಮುಖದರ್ಶನವೇ ನೀಡದೆ ಹೋದಳು.ನನ್ನ ಕೈಯಲ್ಲಿರುವ ನಮ್ಮಿಬ್ಬರ ಪೋಟೊದ ಮೇಲೆ ಅವಳ ಕಣ್ಣಿನಿಂದ ನನ್ನ ಹೃದಯದ ನೋವು ಕಣ್ಣೀರಾಗಿ ಕೆಳಗೆ ಬೀಳುತ್ತಿತ್ತು


ಎನ್.ರಾಜೇಶ್.ಕುಮಾರ್.ನೇರಳಕಟ್ಟೆ

ಕನ್ನಡ ಪುಸ್ತಕಗಳ ಸ್ಥಿತಿ

 ನನಗೆ ರವಿ ಬೆಳಗೆರೆಯವರ "ನಕ್ಷತ್ರ ಜಾರಿದಾಗ" ಮತ್ತು ಯಂಡಮೂರಿಯವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ "ದೀಪ ದೃಷ್ಟಿ" ಪುಸ್ತಕಗಳೆರೆಡು ಸಿಕ್ಕಿರಲಿಲ್ಲ.ತುಂಬಾ ಹುಡುಕಾಡಿದೆ. ಪುಸ್ತಕದಂಗಡಿಗಳಲ್ಲೂ,ಫ಼ೇಸಬುಕಿನಲ್ಲಿ ಸಹ ವಿಚಾರಿಸಿದೆ ಎಲ್ಲೂ ಸಿಗಲಿಲ್ಲ.ಕೊನೆಗೆ ಗೆಳೆಯನೊಬ್ಬ ಮೈಸೂರ್ ಬ್ಯಾಂಕ್ ಸರ್ಕಲಿನಲ್ಲಿ ಹಳೆಯ ಪುಸ್ತಕಗಳನ್ನು ಮಾರುವ ಅಜ್ಜ ಇದ್ದಾರೆ ಅವರ ಹತ್ತಿರ ಹೋಗಿ ವಿಚಾರಿಸು ಅಂತ ಹೇಳಿದ.ಅದಕ್ಕಾಗಿ ಇವತ್ತು ಬೆಳಿಗ್ಗೆ ಮ್ಯಾಚ್ ಮುಗಿಸಿಕೊಂಡು ಆ ಅಜ್ಜನ ಹತ್ತಿರ ಹೋಗಿದ್ದೆ ಅಲ್ಲೂ ಸಿಗಲಿಲ್ಲ ಆದರೆ ಸಾಧ್ಯವಾದರೆ ತರಿಸಿಕೊಡುತ್ತೇನೆ ಅಂತ ಹೇಳಿದರು ಅಜ್ಜ.ಅಲ್ಲಿಯೇ ಇದ್ದ ಪುಸ್ತಕಗಳನ್ನು ನೋಡುವಾಗ "ಮಹಾತ್ಮ ಗಾಂಧೀಜಿಯವರ ಆತ್ಮಕಥೆ" ಪುಸ್ತಕ ಅದನ್ನು ಕನ್ನಡಕ್ಕೆ ಗೊರೂರು ರಾಮಸ್ವಾಮಿಯವರು "ನನ್ನ ಸತ್ಯಾನ್ವೇಷಣೆ" ಅಂತ ಅನುವಾದ ಮಾಡಿದ ಪುಸ್ತಕ ಅಲ್ಲಿತ್ತು. ನಾನು ಈ ಪುಸ್ತಕಕ್ಕೆ ಏಷ್ಟು ಅಂತ ಕೇಳಿದೆ. ಅಜ್ಜ ಹೇಳಿದರು "ಇಪ್ಪತ್ತು ರೂಪಾಯಿ" ಕೊಡಿ ಅಂತ.ನನಗೆ ಆಶ್ಚರ್ಯವಾಯಿತು ೫೨೦ ಪುಟಗಳಿರುವ ಅದು ನಮ್ಮ ದೇಶದ ಮಹಾತ್ಮನ ಆತ್ಮಕಥೆ ಇರುವ ಪುಸ್ತಕಕ್ಕೆ ಕೇವಲ ೨೦ ರೂಪಾಯಿ ಅಂದಾಗ. ನಾನು ಮತ್ತೆ ಕೇಳಿದೆ ಅಂಕಲ್ ಗಾಂಧೀಜಿಯವರ ಪುಸ್ತಕಕ್ಕೆ ಬೆಲೆನೇ ಇಲ್ವಾ ಇಷ್ಟು ಕಮ್ಮಿ ಕೇಳುತ್ತಿದ್ದೀರಿ ಅಂದೆ.ಮೂರು ತಿಂಗಳಿನಿಂದ ನನ್ನ ಹತ್ತಿರವೇ ಇದೆ ಈ ಪುಸ್ತಕ ೨೦ ರೂಪಾಯಿಗೆ ಕೊಡುತ್ತಿನಿ ಅಂದರು ಯಾರು ತೆಗೆದುಕೊಂಡು ಹೋಗಲಿಲ್ಲ ನೀನು ಬೆಲೆ ಬಗ್ಗೆ ಮಾತನಾಡುತ್ತೀಯಾ.ಓದುಗರ ಮನಸ್ಥಿತಿ ಬದಲಾಗಿದೆ ಕಣ್ಣಪ್ಪಾ, ಅಲ್ನೋಡು ಅಲ್ಲಿರುವ ಕ್ರೈಮ್,ಸ್ಪೈ,ಥ್ರಿಲ್ ದಿನಕ್ಕೆ ೧೫ ಪುಸ್ತಕ ಮಾರಾಟವಾಗುತ್ತೆ ಅದು ನಾವು ಕೇಳಿದ ಬೆಲೆಗೆ.ಬೇರೆ ಕನ್ನಡ ಕಾದಂಬರಿ, ಕವನದ ಪುಸ್ತಕಗಳು ಅರ್ಧಬೆಲೆಗೆ ಕೊಡುತ್ತೀನಿ ಅಂದರೂ ಹೆಚ್ಚಿನವರು ತೆಗೆದುಕೊಳ್ಳುವುದಿಲ್ಲ.೭೦೦ ಪುಟಗಳಿರುವ ಮಹಾಭಾರತ,ರಾಮಾಯಣ ಪುಸ್ತಕಗಳಿಗೆ ೧೦೦ ರೂಪಾಯಿ ಕೊಡಿ ಅಂದರೆ ಯಾರು ಕೊಡುವುದಿಲ್ಲ.ಅದೇ ೩೦ ಪುಟಗಳಿರುವ ಸೆಕ್ಸ್ ಪುಸ್ತಕಗಳಿಗೆ ಪುಲ್ ರೇಟ್ ಕೊಟ್ಟು ಖರೀದಿ ಮಾಡುತ್ತಾರೆ ಅಂತ ಅಜ್ಜ ಹೇಳಿದರು.ಅವರ ಮಾತಿಗೆ ಏನು ಹೇಳಬೇಕು ಅಂತ ತಿಳಿಯದೇ ಗಾಂಧೀಜಿಯವರ ಆತ್ಮಕಥೆ ಪುಸ್ತಕಕ್ಕೆ  ೨೦ ರೂಪಾಯಿ  ಕೊಟ್ಟು ತಗೊಂಡು ಮನೆಗೆ ಬಂದೆ.

-ಎನ್.ಆರ್.ಕೆ.

"ಅಪ್ಪ-ಮಗ"

 ಮುಸ್ಸಂಜೆಯ ವೇಳೆ ಸೂರ್ಯ ತನ್ನ ದಿನದ ಕೆಲಸ ಮುಗಿಸಿ ಪಡುವಣದತ್ತ ಹೋಗುತ್ತಿದ್ದಾನೆ.ಹಕ್ಕಿಗಳು ಚಿಲಿಪಿಲಿಗುಟ್ಟುತ್ತ ತಮ್ಮ ಮನೆ ಕಡೆಗೆ ಹೋಗುತ್ತಿದ್ದವು. ಏಳನೀರು ವ್ಯಾಪಾರಿ ರಾಮಣ್ಣ ಈ ಲೋಕದ ವ್ಯಾಪಾರ ಮುಗಿಸಿ ದೇವರ ಹತ್ತಿರ ಹೋಗಲು ಕೊನೆಘಳಿಗೆ ಏಣಿಸುತ್ತಿದ್ದನು.ಊರಿನ ಜನರೆಲ್ಲಾ ರಾಮಣ್ಣನ ಮನೆಯ ಬಳಿ ಬಂದಿದ್ದರು.ಅಷ್ಟರಲ್ಲಿ ಸುಮ್ಮನಿದ ಬಂಡೆಗೆ ಅಲೆ ಅಪ್ಪಳಿಸಿದಂತೆ ರಾಮಣ್ಣನ ತೆಂಗಿನಮರಕ್ಕೆ "ಸಿಡಿಲು" ಬಡಿಯಿತು ಆ ಮರ ಅಲ್ಲಿಯೇ ತುಂಡಾಗಿ ಕೆಳಗೆಬಿತ್ತು.ಯಾರೋ ಕೂಗಿ ಹೇಳಿದ "ರಾಮಣ್ಣನ ಸಾಕುಮಗ(ತೆಂಗಿನಮರ) ಸಿಡಿಲಿನ ಹೊಡೆತಕ್ಕೆ ಸಿಕ್ಕಿ ತುಂಡಾಗಿಬಿಟ್ಟಿತು" ಆ ಮಾತನ್ನು ಕೇಳಿದ ತಕ್ಷಣ ಇಷ್ಟೊತ್ತು ಬಿಗಿಹಿಡಿದಿದ್ದ ತನ್ನ ಉಸಿರನ್ನು ನಿಲ್ಲಿಸಿದ.
  ರಾಮಣ್ಣ ಬಡ ಏಳನೀರು ವ್ಯಾಪಾರಿ.ಪರೋಪಕಾರಿ ಮನೋಭಾವದ ಸಹೃದಯದ ವ್ಯಕ್ತಿ ಆಗಿರುವುದರಿಂದ ಊರಿನವರಿಗೆ ಅವನನ್ನು ಕಂಡರೆ ತುಂಬಾ ಪ್ರ‍ೀತಿ.ರಾಮಣ್ಣನ ಹೆಂಡತಿ ತನ್ನ ಮೊದಲ ಹೆರಿಗೆಯಲ್ಲಿ ಗಂಡುಮಗುವನ್ನು ಕೊಟ್ಟು ದೇವರ ಪಾದ ಸೇರಿದ್ದಳು.ಹೆಂಡತಿ ಸುಟ್ಟ ಜಾಗದಲ್ಲಿ ಒಂದು ತೆಂಗಿನ ಸಸಿಯನ್ನು ನೆಟ್ಟಿದ.ಮಗನನ್ನು ಪ್ರೀತಿಯಿಂದ ನೋಡಿಕೊಳ್ಳುವ ಹಾಗೆ ಆ ತೆಂಗಿನಗಿಡವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.ದನಕರುಗಳಿಂದ ರಕ್ಷಿಸಿ ಪ್ರತಿದಿನ ತಪ್ಪದೇ ನೀರುಣಿಸುತ್ತಿದ್ದ.ಎಲ್ಲರಿಗೂ ಮಗನನ್ನು ತೋರಿಸಿ ಇವನು ನನ್ನ ಸ್ವಂತ ಮಗ,ತೆಂಗಿನಮರವನ್ನು ತೋರಿಸಿ ಸಾಕುಮಗ ಅನ್ನುತಿದ್ದ.ಮಗನ ವಿದ್ಯಾಭ್ಯಾಸಕ್ಕೆ ತನ್ನಲ್ಲಿರುವದೆಲ್ಲವನ್ನು ಕೊಟ್ಟಿದ್ದ.
  ಮಗ ಮತ್ತು ಸಾಕುಮಗ ಇಬ್ಬರು ಬೆಳೆದು ದೊಡ್ಡವರಾದರು.ಮಗನ ಖರ್ಚಿಗೆ ಎಷ್ಟು ಕೊಟ್ಟರು ಸಾಲದು ಅಂತ ಕೂಗಾಡುತ್ತಿದ್ದ.ಸಾಕುಮಗ ತನ್ನ ಸಾಕುತಂದೆಯಿಂದ ಏನು ತೆಗೆದುಕೊಳ್ಳದೇ ಅಪ್ಪನಿಗೆ ಪ್ರೀತಿಯಿಂದ ತನ್ನದೆಲ್ಲಾವನ್ನು ಕೊಡುತ್ತಿದ್ದ.ಮುದಿ ಅಪ್ಪನನ್ನು ಸಾಕಲು ಆಗದೇ ಸ್ವಂತ ಮಗ ಹೇಳದೇ ಕೇಳದೆ ಊರುಬಿಟ್ಟು ಓಡಿಹೋದ.ಆ ಘಟನೆಯ ನಂತರ ಪೂರ್ತಿ ಕುಗ್ಗಿಹೋದ.ತನ್ನ ಮಗ ನನಗೆ ಮಾಡಿದ ಮೋಸವನ್ನು ನೆನೆದು ಪ್ರತಿದಿನ ಅಳುತ್ತಿದ್ದ.ಸಾಕುಮಗನ ಆದಾಯದಿಂದ ರಾಮಣ್ಣನ ಜೀವನ ನಡೆಯುತ್ತಿತ್ತು.ಸ್ವಂತ ಮಗ ಕೈಬಿಟ್ಟರೂ ಸಾಕುಮಗ ಕೈಬಿಡಲಿಲ್ಲ.
 ಪ್ರೀತಿಯಿಂದ ಸಾಕಿದ ಮಗ ಜೀವನದ ಇಳಿವಯಸ್ಸಿನಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅನ್ನುವ ನಂಬಿಕೆಯಲ್ಲಿದ್ದ ಅಪ್ಪನಿಗೆ ಮಗ ಮಾಡಿದ ನಂಬಿಕೆ ದ್ರ‍ೋಹವನ್ನು ಆ ಮುದಿ ಹೃದಯ ಏಷ್ಟುದಿನ ತಡೆದಿತು.ಆ ಕೊರಗಿನಲ್ಲಿಯೇ ರಾಮಣ್ಣ ತನ್ನ ಕೊನೆಯ ಘಳಿಗೆ ಏಣಿಸುತ್ತಿದ್ದ.ಅದೇ ಸಮಯದಲ್ಲಿ ಆದ ಸಾಕುಮಗನ ಸಾವು ರಾಮಣ್ಣನ ಉಸಿರನ್ನು ನಿಲ್ಲಿಸಿಬಿಟ್ಟಿತು.
 ಸಾಕುಮಗನನ್ನೇ(ತೆಂಗಿನಮರ) ಎರಡು ತುಂಡುಮಾಡಿ ಮಗನನ್ನು ಅಪ್ಪನ ಶವದ ಅಡಿಯಲ್ಲಿಟ್ಟು ಊರಿನ ಜನರು ಅವರಿಬ್ಬರ ಶವಕ್ಕೆ ಬೆಂಕಿಯಿಟ್ಟರು.ಅಪ್ಪ-ಮಗ ಇಬ್ಬರು ಜೊತೆಯಾಗಿ ಮೋಸದ ಪ್ರಪಂಚದದಿಂದ ಮುಕ್ತಿಹೊಂದಿ ದೇವರೆಡೆಗೆ ಹೊರಟರು.

ಎನ್.ರಾಜೇಶ್.ಕುಮಾರ್.ನೇರಳಕಟ್ಟೆ.