Friday, 28 December 2012

"ಕೀಳುಮಾತಿನ ಪ್ರಚಾರಪ್ರಿಯರು"



ಇತ್ತೀಚಿಗೆ ನಮ್ಮ ಸಮಾಜದ ಕೆಲವು ಗಣ್ಯವ್ಯಕ್ತಿಗಳು,ರಾಜಕೀಯದವರು,ರಾಜಕೀಯದವರ ಮಕ್ಕಳುಗಳು ಮತ್ತು ಸಾಹಿತಿಗಳು ಪುಕ್ಕಟೆ ಪ್ರಚಾರ ಗಿಟ್ಟಿಸಲು ಒಂದು ದಾರಿ ಕಂಡುಕೊಂಡಿದ್ದಾರೆ ಅದು ಏನೆಂದರೆ ನಮ್ಮ ಹಿಂದಿನ ಮಹಾನ್ ಪುರುಷರ, ಕವಿಗಳು, ಕಾದಂಬರಿಕಾರರು ಬರೆದ ಬರಹಗಳ ಬಗ್ಗೆ,ಅವರ ವಿಚಾರಗಳ ಬಗ್ಗೆ,ಜೀವನದ ಶೈಲಿಯ ಬಗ್ಗೆ,ಸಾರ್ವಜನಿಕರ ಹೋರಾಟದ ಬಗ್ಗೆ, ಸಾರ್ವಜನಿಕವಾಗಿ ವಿವಾದಾತ್ಮಕ ಹೇಳಿಕೆ ನೀಡುವುದು.ದೇಶಕ್ಕೆ ಏನಾದರೂ ಕೊಡುಗೆ ನೀಡಿ ಅಥವಾ ಒಳ್ಳೆಯ ಕೆಲಸ,ಬಡಬಗ್ಗರಿಗೆ ಸಹಾಯ ಮಾಡುವುದರ ಮೂಲಕ ಹೆಸರು ಗಳಿಸುವುದು ಬಿಟ್ಟು ಬೇಡದ ವಿಷಯಗಳ ಬಗ್ಗೆ ಕೆಟ್ಟದಾಗಿ ಮಾತನಾಡಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ.ನಮ್ಮ ರಾಷ್ಟ್ರಪತಿಯವರಿಗೆ ಒಬ್ಬ ಮೂರ್ಖ ಮಗನಿರುವ ವಿಷಯ ಇಲ್ಲಿಯ ತನಕ ಹೆಚ್ಚಿನವರಿಗೆ ತಿಳಿದಿಲ್ಲ.ಅವನು ದಿಲ್ಲಿಯಲ್ಲಿ ನಡೆಸುತ್ತಿರುವ ಜನರ ಪ್ರಾಮಾಣಿಕ ಹೋರಾಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಅಗ್ಗದ ಪ್ರಚಾರ ಗಿಟ್ಟಿಸಿಕೊಂಡ.ಹಣ ಖರ್ಚುಮಾಡದೇ ಪುಕ್ಕಟೆಯಾಗಿ ಸಿಕ್ಕ ಪ್ರಚಾರ ಅದು.ಮುಂದಿನ ಚುನಾವಣೆಗೆ ನಿಂತರೆ ಅವನಿಗೆ ಪ್ರಚಾರದ ಅಗತ್ಯವಿಲ್ಲ ಅನಿಸುತ್ತಿದೆ.ರಾಷ್ಟ್ರಪತಿ ಮಗ ಒಬ್ಬನೇ ಅಲ್ಲ ಪ್ರತಿಯೊಬ್ಬರು ಇದೇ ದಾರಿ ಹಿಡಿದಿದ್ದಾರೆ ಅದೇ ದುರಂತದ ಸಂಗತಿ. ಟೀಕೆ ಮಾಡುವವರಿಗೆ ಗೊತ್ತಿರುತ್ತದೆ ನಾವು ಮಾಡುತ್ತಿರುವುದು ತಪ್ಪು ಅಂತ ಆದರೂ ತಮ್ಮ ಇರುವಿಕೆಯನ್ನು ತೋರಿಸಲು, ನಾವು ಭಾರತದಲ್ಲಿ ಜೀವಂತ ಇದ್ದೇವೆ ಅಂತ ತೋರಿಸಲ್ಲಿಕ್ಕೆ ತರ ಮಾಡುತ್ತಿದ್ದಾರೆ ಅದಕ್ಕೆ ಸರಿಯಾಗಿ ನಮ್ಮ ಮಾಧ್ಯಮಗಳು ಸುಮ್ಮನೆ ಪ್ರಚಾರ ಕೊಡುವುದರಿಂದ ತರ ಮಾಡುವವರು ಸಂಖ್ಯೆ ದಿನದಿನ ಹೆಚ್ಚಾಗುತ್ತಿದೆ.ಇಂತಹ ವಿಷಯಗಳಿಗೆ ಮೊದಲು ಕಡಿವಾಣ ಹಾಕಬೇಕು ಇಲ್ಲದಿದ್ದರೆ ಇದು ಅಂಟುರೋಗದಂತೆ ಬೆಳೆಯುದರಲ್ಲಿ ಅನುಮಾನವೇ ಇಲ್ಲಾ ಅನಿಸುತಿದೆ. ಸಾರ್ವಜನಿಕವಾಗಿ ವಿವಾದಾತ್ಮಕ ಹೇಳಿಕೆ ನೀಡುವವರಿಗೆ ಜೈಲಿಗೆ ಹಾಕಿ ಕಠಿಣ ಶಿಕ್ಷೆ ವಿಧಿಸಬೇಕು ಅವಾಗಾಲಾದರೂ ತರ ಹೇಳಿಕೆ ಕೊಡುವುದು ಕಮ್ಮಿ ಆಗಬಹುದು ಅಷ್ಟೆ..ಮತ್ತೆ ಮಾಧ್ಯಮದವರು ಇಂತ ವಿಷಯಗಳಿಗೆ ಹೆಚ್ಚಿನ ಮಹತ್ವ ಕೊಡದೇ ಇದ್ದರೆ ಅವಾಗ ಕೂಡ ಸಮಸ್ಯೆ ಸ್ವಲ್ಪ ಕಮ್ಮಿ ಆಗಬಹುದು.ನಮ್ಮ ಜನ ಪ್ರಚಾರಕೋಸ್ಕರ ಏನು ಬೇಕಾದರೂ ಮಾಡುತ್ತಾರೆ ಅನ್ನುವುದಕ್ಕೆ ಇದೇ ಸಾಕ್ಷಿ....
            -ಎನ್.ಆರ್.ಕೆ.ನೇರಳಕಟ್ಟೆ..

Wednesday, 26 December 2012

"ಮೊದಲ ನೋಟ"



  ಪ್ರೀತಿ ಎನ್ನುವ ಮಾಯಾಪ್ರಪಂಚದ ಬಗ್ಗೆ ನಾನು ತಲೆಕೆಡಿಸಿಕೊಂಡಿರಲಿಲ್ಲ."ಪ್ರವಾಲಿಕಳನ್ನು" ನೋಡುವ ತನಕ.ಕ್ರಿಕೇಟ್ ಮತ್ತು ಓದುಬರಹದ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದೆ.ಯಾವಾಗ ಅವಳನ್ನು ನೋಡಿದೆನೋ ಆಗಲೇ ನನ್ನ ಹೃದಯದಲ್ಲಿ ಪ್ರೀತಿಯ ಘಂಟೆ ಮೊಳಗಿತು. ಅವಳನ್ನು ನೋಡುವ ಮುಂಚೆ ಮೊದಲ ನೋಟದಲ್ಲಿ ಪ್ರೀತಿ ಹುಟ್ಟುತ್ತದೆ ಅಂತ ಯಾರಾದರೂ ಹೇಳಿದರೆ ನಗಾಡುತ್ತಿದ್ದೆ.ಅದು ಸುಳ್ಳೆಂದು ಆ ತರಹ ಆಗಲ್ಲಿಕ್ಕೆ ಸಾಧ್ಯವೇ ಇಲ್ಲ ಅಂತ ವಾದಿಸುತ್ತಿದ್ದೆ.ಆದರೆ ನನ್ನ ಜೀವನದಲ್ಲಿಯೇ ನಡೆದ ಮೇಲೆ ಮೊದಲ ನೋಟದಲ್ಲಿ ಪ್ರೀತಿ ಹುಟ್ಟುತ್ತದೆ ಅನ್ನುವ ಮಾತು ಸತ್ಯ ಅನಿಸುತಿದೆ ನನಗೆ.
  ಫೇಸಬುಕ್ ನಲ್ಲಿ ಪರಿಚಯವಾದ ಮೈಸೂರಿನ ಪ್ರಸಿದ್ಧ ಡಾಕ್ಟರ್ ರಂಜಿತ್ ಅವರ ೨೦ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಕರೆದಿದ್ದರು.ಆ ಅದ್ಧೂರಿ ಸಮಾರಂಭಕ್ಕೆ ನನ್ನ ಮತ್ತು ಅವರ ಎಲ್ಲಾ ಫೇಸಬುಕ್ ಗೆಳೆಯ ಗೆಳತಿಯರು ಬಂದಿದ್ದರು.ಅದರಲ್ಲಿ ನನ್ನ ಗೆಳತಿಯೊಬ್ಬರು ತನ್ನೊಂದಿಗೆ ತಂಗಿಯನ್ನು ಕರೆದುಕೊಂಡು ಬಂದಿದ್ದರು.ಅವಳೇ "ಪ್ರವಾಲಿಕಾ".ಅಲ್ಲೇ ಮೊದಲಬಾರಿಗೆ ಅವಳನ್ನು ನೋಡಿದ್ದು.ಅವಳ ಅಕ್ಕ ನನ್ನನ್ನು ಅವಳಿಗೆ "ವಿನಯ್" ಅಂತ ಅಂದು ನನಗೆ ಇವಳು ನನ್ನ ತಂಗಿ "ಪ್ರವಾಲಿಕಾ" ಎಂದು ಪರಿಚಯಿಸಿದಾಗ ಅವಳು ನಗುತ್ತ "ಹಲೋ" ಅಂದಳು.ಅಬ್ಬ! ಎಂತಹ ನಗು! ಅಷ್ಟು ಮುದ್ದಾಗಿತ್ತು ಅವಳ ನಗು! ಎಲ್ಲರೂ ಜೋಕ್ ಮಾಡುತ್ತಾ,ನಗುತ್ತಾ ಮಾತನಾಡುತ್ತಿದ್ದರೆ ನಾವಿಬ್ಬರು ಮಾತ್ರ ಸುಮ್ಮನೆ ಕುಳಿತುಕೊಂಡಿದ್ದೆವು.ಆಕೆ ನನ್ನ ಹಾಗೆಯೇ ಹೆಚ್ಚು ಮಾತನಾಡುವವಳಲ್ಲ ಅಂತ ನನಗಾಗಲೇ ತಿಳಿಯಿತು.ಊಟಕ್ಕೆ ನನ್ನ ಪಕ್ಕದಲ್ಲಿ ಕುಳಿತುಕೊಂಡಿದ್ದಳು ತುಂಬಾ ಖುಷಿಯಾಗಿತ್ತು ನನಗೆ.ಅದು ನನ್ನ ಪಾಲಿಗೆ ಮರೆಯಲಾಗದ ಕ್ಷಣ.
  ಊಟ ಮುಗಿದ ತಕ್ಷಣ ನನ್ನ ಗೆಳೆಯ-ಗೆಳತಿಯರು ಏನಾದರೂ ಆಟ ಆಡೋಣ ಎಂದರು.ಎಲ್ಲರೂ ಕೇರ್ಂ,ಚೆಸ್,ಕಾರ್ಡ್ಸ್ ಆಡಲ್ಲಿಕ್ಕೆ ಶುರುಮಾಡಿದರು.  ಆದರೆ ಪ್ರವಾಲಿಕ ಮಾತ್ರ ಆಡಲ್ಲಿಕೆ ಬರದೇ ಕೇರ್ಂ ಆಡುತ್ತಿದ್ದ ನನ್ನ ಎದುರಿಗೆ ಕುರ್ಚಿಯ ಮೇಲೆ ಕುಳಿತಳು.ಎಲ್ಲರೂ ಆಟವಾಡುತ್ತಿದ್ದರು.ಎಲ್ಲರ ಕಣ್ಣು ತಪ್ಪಿಸಿ ನಾನು ಪ್ರವಾಲಿಕಳನ್ನು ನೋಡುತ್ತಿದ್ದೆ.ಆ ವೇಳೆಗೆ ಅವಳು ಧರಿಸಿದ್ದ ಚೂಡಿಧಾರ್ ವೇಲ್ ಕುತ್ತಿಗೆಯಿಂದ ಜಾರಿ ಕೆಳಗೆ ಬಂದಿತ್ತು.ಅದು ಅವಳಿಗೆ ತಿಳಿಯದೆ ಹೋಗಿತ್ತು.ವೇಲ್ ಜಾರಿ ಹೋಗಿದ್ದರಿಂದ ಅವಳ  ಸೌಂದರ್ಯ ಕಾಣುತ್ತಿತ್ತು.ಹುಡುಗರೆಲ್ಲ ತುಂಬಿರುವ ಜಾಗದಲ್ಲಿ ಹೀಗೆ ಇದ್ದರೆ ಕಷ್ಟ ಅಂತ ಅನಿಸಿತ್ತು.ಆದರೆ ಅದನ್ನು ಅವಳಿಗೆ ಹೇಗೆ ಹೇಳುವುದು ಎಂದು ಒದ್ದಾಡುತ್ತಿದ್ದೆ.ಅಷ್ಟರಲ್ಲಿ ನನ್ನ ಮನದ ಮಾತು ಕೇಳಿಸಿತೆಂಬಂತೆ ಅವಳೇ ನನ್ನೆಡೆಗೆ ದೃಷ್ಟಿ ಹರಿಸಿದಳು.ನಾನು ತಕ್ಷಣ ಟೀ-ಶರ್ಟ್ ಅನ್ನು ಎದೆಯಿಂದ ಸ್ವಲ್ಪ ಮೇಲೆ ಎಳೆದುಕೊಂಡೆ.ಅದನ್ನು ನೋಡಿದ ಅವಳು ತಕ್ಷಣವೇ ಅರಿವಾಗಿ ಬಟ್ಟೆ ಸರಿಮಾಡಿಕೊಂಡಳು.
  ಬಟ್ಟೆ ಸರಿ ಮಾಡಲ್ಲಿಕ್ಕೆ ಏನೋ ಹೇಳಿಬಿಟ್ಟೆ ಆದರೆ ಆನಂತರ ಭಯ ಆಗಲ್ಲಿಕ್ಕೆ ಶುರುವಾಯಿತು.ನನ್ನ ವರ್ತನೆಯಿಂದ ಅವಳು ತಪ್ಪು ತಿಳಿದಳೇನೋ,ಅವಳು ಅಕ್ಕನ ಬಳಿ ನಿನ್ನ ಗೆಳೆಯ ಸರಿ ಇಲ್ಲ ಅಂತ ಹೇಳಿದರೆ...ಅನ್ನೋ ಅಳುಕುಂಟಾಯಿತು.ಪರಿಚಯವಿಲ್ಲದ ಹುಡುಗಿಗೆ ಅದು ಮೊದಲಬಾರಿಗೆ ಭೇಟಿಯಾದ ಹುಡುಗಿಗೆ ಆ ರೀತಿ ಹೇಳುವ ಧೈರ್ಯ ಅದೆಲ್ಲಿಂದ ಬಂತೋ ಇಲ್ಲಿಯ ತನಕ ತಿಳಿದಿಲ್ಲ.
 ಕೇರ್ಂ ಆಟ ಮುಗಿಯಿತು ನಾನು ಅವಳ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡೆ.ಆಗ ಅವಳು ನನಗೆ ಮಾತ್ರ ಕೇಳಿಸುವ ಹಾಗೇ ಹಗುರವಾಗಿ "ತುಂಬಾ ಥ್ಯಾಂಕ್ಸ್" ಅಂದಳು.ನನಗೆ ಎಷ್ಟು ಖುಷಿಯಾಯಿತು ಅಂದರೆ ಸ್ವರ್ಗ ಸಿಕ್ಕಷ್ಟೇ ಖುಷಿಯಾಗಿತ್ತು.ಯಾಕೆಂದರೆ ಅವಳಿಗೆ ನಾನು ಹೇಳಿದ್ದು ಅರ್ಥವಾಗಿತ್ತು.ತಪ್ಪು ತಿಳಿದುಕೊಂಡಿರಲಿಲ್ಲ ಅವಳು ಅದೇ ನನಗೆ ತುಂಬಾ ಖುಷಿಯಾಗಿತ್ತು.ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿತ್ತು ಅವಳಿಗೆ ಆ ಘಟನೆಯ ನಂತರ.ನನಗೂ ಸಹ ಅವಳೇ ನನ್ನ ಪ್ರೀತಿಯ ಹುಡುಗಿ ಅನಿಸೋದಕ್ಕೆ ಶುರುವಾಯಿತು.ಮೊದಲನೋಟಕ್ಕೆ ಮರೆಯಲಾರದಂತೆ ಇಷ್ಟಪಟ್ಟಿದ್ದೆ "ಪ್ರವಾಲಿಕಳನ್ನು".
  ಆದರೆ ನನ್ನ ಪ್ರೀತಿಯ ವಿಷಯ ಹೇಳಿರಲಿಲ್ಲ.ಅದಾದ ನಂತರ ಅವಳು ಪತ್ತೆಯಿರಲಿಲ್ಲ.ಮನಸ್ಸು ಅವಳನ್ನು ನೋಡಬೇಕೆಂದು ಕಾತರಿಸಿದರೂ
ಕೂಡಾ ಮನದ ಭಾವನೆಗಳನ್ನು ಅಂಕೆಯಲ್ಲಿಟ್ಟು ಬಂಧಿಸಿದೆ.ಅವಳ ಅಕ್ಕನಿಗೆ ಪೋನ್ ಮಾಡಿ ವಿಚಾರಿಸಬೇಕು ಎನಿಸುತ್ತಾದರೂ,ಇದರಿಂದ ಅವಳಿಗೆ ತೊಂದರೆ ಆದರೆ ಅಂತ ನನ್ನನ್ನು ನಿಯಂತ್ರಿಸಿಕೊಂಡಿದ್ದೆ.ಅವಳ ಅಕ್ಕನಿಗೆ ಹೀಗೆ ಒಮ್ಮೆ ಪೋನ್ ಮಾಡಿದಾಗ ಮತ್ತೆ ಸಿಕ್ಕಿದಳು ನನ್ನ "ಪ್ರವಾಲಿಕ"
  ದಿನ ಕಳೆದಂತೆ ಅವಳನ್ನು ಬಿಟ್ಟು ಅಸಾಧ್ಯ ಎನಿಸಿದಾಗ ಅವಳಲ್ಲಿ ಪ್ರೀತಿಯನ್ನು ಭಿನ್ನವಿಸಿಕೊಂಡು ಒಪ್ಪಿಗೆ ಪಡೆದು,ಅನಂತರ ನಾನೇ ಮುಂದೆ ನಿಂತು ನನ್ನ ಮತ್ತು ಅವಳ ಮನೆಯವರ ಒಪ್ಪಿಗೆಯನ್ನೂ ಪಡೆದೆ.ಒಂದೇ ಜಾತಿಯಾಗಿದ್ದರಿಂದ ಅವಳ ಮನೆಯವರೂ ಸಮ್ಮತಿ ಸೂಚಿಸಿದರು.ಮೊದಲ ನೋಟಕ್ಕೆ ಇಷ್ಟಪಟ್ಟು ಪ್ರಪೋಸ್ ಮಾಡದೇ,ಜಾಸ್ತಿ ಮಾತನಾಡದೇ,ಎಲ್ಲಿಯೂ ತಿರುಗಾಡದೇ ಒಂದೇ ವರ್ಷದಲ್ಲಿ ನಾನು-ಪ್ರವಾಲಿಕ ಮದುವೆಯಾದವು.ಮದುವೆಯ ಮುಂಚಿನ ಪ್ರೀತಿಯನ್ನು ಮದುವೆಯಾದ ಮೇಲೆ ನನಗೆ ಕೊಡುತ್ತಿದ್ದಾಳೆ.ಹಾಗಂತ ಎಲ್ಲರಿಗೂ ಮೊದಲ ನೋಟದಲ್ಲಿಯೇ ಈ ರೀತಿ ಹುಡುಗಿ ಸಿಗುತ್ತಾಳೆಂದು ಹೇಳುವುದು ಕಷ್ಟ.ಆ ವಿಷಯದಲ್ಲಿ ನಾನು ತುಂಬಾ ಅದೃಷ್ಟವಂತ.ನನ್ನ ಮನ ಮೆಚ್ಚಿದ ಹುಡುಗಿಯೇ ಈಗ ನನ್ನ ಮನ ಬೆಳಗುವ ದೇವತೆಯಾಗಿದ್ದಾಳೆ.............



(ಈ ಕಥೆಯಲ್ಲಿನ ವ್ಯಕ್ತಿಗಳು, ಹೆಸರುಗಳು ಕಾಲ್ಪನಿಕವಾಗಿದ್ದು.ಯಾವುದೇ ವ್ಯಕ್ತಿಗೆ ಸಂಬಂಧಪಟ್ಟಿಲ್ಲ.ಇದೊಂದು ನನ್ನ ಕಲ್ಪನೆಯ ಕಥೆ)

                                      ಎನ್.ಆರ್.ಕೆ.ನೇರಳಕಟ್ಟೆ

Tuesday, 25 December 2012

"ನೋವಿನ ಕಥೆ"

ತಂದೆ-ತಾಯಿ ಯಾರೆಂದು ಗೊತ್ತಿಲ್ಲ
 ರಸ್ತೆಯ ಬದಿಯಲ್ಲಿ ನನ್ನ ಎಸೆದು ಹೋಗಿದ್ದರು
 ಯಾರು ಕೂಡ ಹನಿ ನೀರು ಕೊಡಲಿಲ್ಲ
 ವರುಣದೇವ, ಭೂಮಿತಾಯಿಯ ಕೃಪೆಯಿಂದ
 ನಾನು ಭಯದಿಂದಲೇ ಬೆಳೆದೆ
 ವರ್ಷಗಳ ನಂತರ ವಯಸ್ಸಿಗೆ ಬಂದ
 ತರುಣಿಯ ತರಹ ಮುದ್ದುಮುದ್ದಾಗಿ ಬೆಳೆದೆ
 ಎಲ್ಲರ ಕಣ್ಣು ನನ್ನನ್ನೇ ನೋಡುವ ಹಾಗೇ...
 ಊರಿನಲ್ಲಿ ಮದುವೆ ಆಗುತ್ತೆ ಅಂದರೆ ಎಲ್ಲಾ
 ಬಂದು ನನ್ನ ಜೀವ ಕಿತ್ತು ತಿನ್ನುತ್ತಿದ್ದರು
 ಆ ಕ್ಷಣದಲ್ಲಿ ಆಗುವ ನೋವು ಯಾರಿಗೂ ಬೇಡ...
 ವರ್ಷಗಳು ಉರುಳಿತು
 ತಾಯಿಯಾಗುವ ಸಂಭ್ರಮ ನನಗೆ
 ಹೆರಿಗೆಯ ನೋವು ಅಷ್ಟಾಗಿರಲಿಲ್ಲ ಆದರೆ
 ಮಕ್ಕಳು ಚಿಕ್ಕವರಿದಿದ್ದಾಗಲೇ
 ಊರಿನವರು ಕಲ್ಲುಹೊಡೆದು, ಬಡಿಗೆಯಿಂದ ಬಡಿದು
 ನನ್ನಿಂದ ಮಕ್ಕಳನ್ನು
 ಕಿತ್ತುಕೊಳ್ಳಲ್ಲಿಕ್ಕೆ ಶುರು ಮಾಡಿದರು
 ಇಷ್ಟು ಅನ್ಯಾಯ ನಡೆದರು ಯಾರಿಗೂ
 ನನ್ನ ನೋವು ಕೇಳಿಸಲಿಲ್ಲ
 ಬಾಯಿ ಬಿಟ್ಟು ಹೇಳುವ ಅಂದರೆ ನಾನು
 ಮೂಕಳಾಗಿದ್ದೆ..
 ಮದುವೆಯ ಮನೆ ಅಲಂಕಾರಕ್ಕೆ,
 ಬಳಲಿ ಬಂದವರಿಗೆ ನೆರಳು,
 ಹಸಿವೆ ಆದವರಿಗೆ ಹಣ್ಣು ನೀಡಿದೆ
 ನಾನು ಕೊಟ್ಟಿದು ಸಾಲದೆಂದು
 ನನ್ನ ಬುಡಕ್ಕೆ ಕೊಡಲಿ ಏಟು ಹಾಕುತ್ತಿದ್ದಾರೆ
 ನಾನು ಮಾಡಿದ ಅನ್ಯಾಯವಾದರೂ ಏನು
 ಅಂತ ತಿಳಿಯದೇ ಸಾಯುತ್ತಿದ್ದೀನಿ...
 ತನಗಾಗಿ ಸ್ವಾರ್ಥದ ಜೀವನ ನಡೆಸಬೇಡ
 ಪರರ ಹಿತಕ್ಕಾಗಿ ಬದುಕು ಎಂದು ಹೇಳಿರುವ
 ಬುದ್ದಿಜೀವಿ ಮಾನವರು
 ಪರರ ಹಿತಕ್ಕಾಗಿ ಬದುಕಿ ಬೆಳೆಯುವ ನನ್ನಂಥ
 ಮರಗಳನ್ನು ಕಾರಣ ಹೇಳದೇ ಕೊಲ್ಲುತ್ತಿದ್ದಾರೆ
 ನಾವು ಅಷ್ಟೊಂದು ನೋವು ಅನುಭವಿಸಿ
 ನಮ್ಮ ಜೀವನ ಹಾಳುಮಾಡಿಕೊಂಡು
 ಇನ್ನೊಬ್ಬರನ್ನು ಖುಷಿಪಡಿಸುವ ಈ ಮರಗಳ
 ಜೀವನ ನನಗೆ ಬೇಡ ದೇವರೆ
 ಆದಷ್ಟು ಬೇಗ ಪಾಪಿ ಮನುಷ್ಯರ
 ಕೈಯಿಂದ ಮುಕ್ತಿ ಕರುಣಿಸು ಎಂದು
 ಕಣ್ಣೀರು ಹಾಕುತ್ತಿತ್ತು ಮಾವಿನ ಮರ...


            ಎನ್.ಆರ್.ಕೆ.ನೇರಳಕಟ್ಟೆ..

Thursday, 20 December 2012

"ಹಳೆಯ ಮಧುರ ನೆನಪುಗಳು"

ಗೆಳೆಯ ಹರ್ಷಿತ್ ಅವರ ಮನೆಯಲ್ಲಿ ರಾತ್ರಿ ಪಾರ್ಟಿ ಇದ್ದಿತ್ತು ಅದನ್ನು ಮುಗಿಸಿಕೊಂಡು ಬೆಳಿಗ್ಗೆ ಮನೆಗೆ ಹೋಗಲು ಬೈಯಪ್ಪನಹಳ್ಳಿಯಿಂದ ಮೆಟ್ರೋ ರೈಲಿನಲ್ಲಿ ಎಮ್.ಜಿ.ರಸ್ತೆಗೆ ಹೊರಟ್ಟಿದ್ದೆ.ಇಂದಿರಾನಗರ ಸ್ಟೇಷನ್ ನಲ್ಲಿ ೪ ವರ್ಷದ ಮಗು ಮತ್ತೆ ಗಂಡನ ಜೊತೆ ಮಾತಾಡುತ್ತಿದ್ದ ಹೆಂಗಸನ್ನು ನೋಡಿದಾಗ ಎಲ್ಲೋ ನೋಡಿದ ನೆನಪು ಅಂತ ಮನಸ್ಸು ಹೇಳುತ್ತಿತ್ತು.ಎಷ್ಟೇ ನೆನಪಿಸಿಕೊಂಡರೂ ನೆನಪಾಗಲಿಲ್ಲ ಅದಕ್ಕೆ ಸುಮ್ಮನಾದೆ.ಅಷ್ಟರಲ್ಲಿ ಆ ಚಿಕ್ಕ ಹುಡುಗ ಮೆಟ್ರೋ ರೈಲಿನ ಒಳಗಡೆ ಬಂದುಬಿಟ್ಟಿದ್ದ ಅವರಿಬ್ಬರು ಮಾತನಾಡುತ್ತಿದ್ದರು ಅವರಿಗೆ ತಿಳಿಯಲೇ ಇಲ್ಲ ಅವಾಗಲೇ ಬಾಗಿಲು ಮುಚ್ಚಿಕೊಂಡಾಗ ಹುಡುಗ ಕೂಗಲ್ಲಿಕ್ಕೆ ಶುರು ಮಾಡಿದ.ಹೊರಗಿನಿಂದ ಅಪ್ಪ-ಅಮ್ಮ ಕೂಡ ನೋಡಿ ಕೂಗುತ್ತ ಓಡಿಬಂದರೂ ರೈಲ್ ನಿಲ್ಲದೆ ಹೊರಟುಬಿಟ್ಟಿತು.
ಅಳುತ್ತಿದ್ದ ಹುಡುಗನ ಕರೆದು ಅಳಬೇಡ ನಾನು ನಿಮ್ಮನೆಗೆ ಕರೆದುಕೊಂಡು ಹೋಗಿಬಿಡುತ್ತೇನೆ ಭಯ ಪಡಬೇಡ ಅಂದಾಗ ಸ್ವಲ್ಪ ಸುಮ್ಮನಾದ.ಅಪ್ಪನ ಪೋನ್ ನಂಬರ್ ಗೊತ್ತಿದಿಯಾ ಅಂತ ಕೇಳಿದೆ.ಅದಕ್ಕೆ ಆ ಹುಡುಗ ಹೌದು ಅಂತ ಕೊಟ್ಟ ನಾನು ಆ ನಂಬರಿಗೆ ಪೋನ್ ಮಾಡಿ ಅವನ ತಂದೆಗೆ ಭಯಪಡಬೇಡಿ ಎಮ್.ಜಿ.ರಸ್ತೆಯಲ್ಲಿ ಕಾಯುತ್ತಿರುತ್ತೇನೆ ಅಂದಾಗ ಅವರು ತುಂಬಾ ಧನ್ಯವಾದಗಳು ಅಂದರು.
ನಿನ್ನ ಹೆಸರೇನು ಅಂದಾಗ ಹುಡುಗ "ಪ್ರಸನ್ನ" ಅಂದಾಗ ಆಶ್ಚರ್ಯವಾಯಿತು.ಯಾಕೆಂದರೆ ನನ್ನ ಹೆಸರು ಪ್ರಸನ್ನ ಆಗಿತ್ತು.ತಂದೆಯ ಹೆಸರು ಕೇಳಿದಾಗ ಸುರೇಶ ಅಮ್ಮನ ಹೆಸರು ಸ್ಪಂದನಾ ಅಂದಾಗ ನನ್ನ ಬಾಲ್ಯದ ಗೆಳತಿ ಸ್ಪಂದನಾಳ ನೆನಪಾಗಿತ್ತು.ಅವಳಾಗಿರಲ್ಲಿಕ್ಕೆ ಸಾಧ್ಯವಿಲ್ಲ ಅಂದುಕೊಂಡೆ.ಎಲ್ಲಿ ಮನೆ,ಶಾಲೆ ಅಪ್ಪ-ಅಮ್ಮ ಏನು ಮಾಡುತ್ತಾರೆ ಅಂತ ಕೇಳಿದೆ.ಎಲ್ಲದಕ್ಕೂ ತುಂಬಾ ಚೂಟಿಯಾಗಿ ಉತ್ತರಿಸುತ್ತಿದ್ದ.ಅವನ ಜೊತೆ ಮಾತನಾಡುವುದಕ್ಕೆ ಒಂಥರಾ ಖುಷಿಯಾಗುತ್ತಿತ್ತು.ಎಮ್.ಜಿ.ರೋಡ್ ಸ್ಟೇಷನನಲ್ಲಿ ಪ್ರಸನ್ನನ ತಂದೆ-ತಾಯಿಗಾಗಿ ಕಾದು ಕುಳಿತೆ.
ರೈಲ್ ಬಂತು ಅದರಲ್ಲಿ ಸುರೇಶ್-ಸ್ಪಂದನ ದಂಪತಿ ಇಳಿದು ಬರುವಾಗ ಅವಳನ್ನು ನೋಡಿದಾಗ ಮನಸ್ಸು ಸ್ಪಂದನಾ ಅಂತ ಗಟ್ಟಿಯಾಗಿ ಕೂಗುತ್ತಿತ್ತು.ಅಳುತ್ತ ಬಂದು ಮಗುವನ್ನು ಜೋರಾಗಿ ತಬ್ಬಿಕೊಂಡರು.ಅವಾಗ ಕುತ್ತಿಗೆಯ ಹತ್ತಿರವಿದ್ದ ಆಪರೇಶನ್ ಕಲೆ ಮತ್ತೆ ಎರಡು ಕೈನಲ್ಲಿ ಆರು ಬೆರಳು ಇದೆ ನೋಡಿದ ಕೂಡಲೇ ತಿಳಿದುಹೋಯಿತು ಇವಳು ನನ್ನ ಬಾಲ್ಯದ ಗೆಳತಿ ಅಂತ.ಸ್ಪಂದನಾ ಕೇಳಿದಳು ನಿಮ್ಮನ್ನು ಮೊದಲು ಎಲ್ಲೊ ನೋಡಿದ ನೆನಪು ಯಾವ ಊರು? ನಿಮ್ಮದು ನಿಮ್ಮ ಹೆಸರೇನು ಅಂತ ಕೇಳಿದಳು.ನಾನು ಬೇಕು ಅಂತ ಸುಳ್ಳು ಹೇಳಿದೆ ಊರು ಶೃಂಗೇರಿ ಹೆಸರು ಸುಭಾಷ್ ಅಂದೆ.ಅದಕ್ಕವಳು ಸುಮ್ಮನಾದಳು.ಸುರೇಶ್ ಹೇಳಿದರು ನಿಮ್ಮಿಂದ ತುಂಬಾ ಉಪಕಾರವಾಯಿತು ಒಂದು ಸಲ ನಮ್ಮನೆಗೆ ಬನ್ನಿ ಅಂದಾಗ ನಾನು ಸರಿ ಸಮಯ ಸಿಕ್ಕಾಗ ಒಮ್ಮೆ ಬರುತ್ತೇನೆ ಅಂತ ಹೇಳಿ ಹೊರಟುಬಂದೆ "ಪ್ರಸನ್ನ ನನಗೆ ಟಾಟಾ ಮಾಡುತ್ತಿದ್ದ.
ಹದಿನೈದು ವರ್ಷಗಳ ನಂತರ ಮೊದಲಬಾರಿಗೆ ಸ್ಪಂದನಾಳನ್ನು ನೋಡಿದ ಖುಷಿ ಒಂದುಕಡೆ ಆದರೆ ನಾನೇ ಪ್ರಸನ್ನ ಅಂತ ಅವಳಿಗೆ ಹೇಳದ ಪರಿಸ್ಥಿತಿಯಿಂದ ತುಂಬಾ ಬೇಸರವಾಗಿತ್ತು.ಜೀವನದಲ್ಲಿ ಅವಳನ್ನು ಮತ್ತೆ ನೋಡುತ್ತಿನಿ ಅಂತ ಕನಸು ಸಹ ಕಂಡಿರಲಿಲ್ಲ ಆದರೆ ಮತ್ತೆ ಸಿಕ್ಕಳು.ನನ್ನ ಮರೆತು ಬಿಟ್ಟು ಹೋಗಿದ್ದಾಳೆಂದು ತಿಳಿದುಕೊಂಡಿದ್ದೆ.ಆದರೆ ಅವಳಿನ್ನು ನನ್ನ ಮರೆತಿಲ್ಲ ಅನ್ನುವುದಕ್ಕೆ ತನ್ನ ಮಗನಿಗೆ ನನ್ನ ಹೆಸರಿಟ್ಟಿದ್ದಾಳೆ ಅನ್ನುವುದೇ ಸಾಕ್ಷಿ.ಮೊದಲ ಪ್ರೀತಿಗೆ ಸಾವಿಲ್ಲ ಅಂತಾರೆ ಅದು ನಿಜ ಅನಿಸುತಿದೆ.
ಪ್ರೀತಿಯೋ ಆಕರ್ಷಣೆಯೋ ತಿಳಿಯದ ವಯಸ್ಸಿನಲ್ಲಿ ಅಂದರೆ ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವಾಗ ಏಳನೆಯ ತರಗತಿಯ ಹುಡುಗಿ ಸ್ಪಂದನಾಳನ್ನು ನೋಡಬೇಕೆನ್ನುವ ಒಂಥರಾ ಹುಚ್ಚು ಆಸೆ.ಅದಕ್ಕಾಗಿ ಕ್ರೀಕೆಟ್ ಆಡುವ ನೆಪದಲ್ಲಿ ಅವರ ಮನೆಗೆ ಹೋಗಿ ಅವಳನ್ನು ನೋಡುತ್ತಿದ್ದೆ.ಅವಳು ಸಹ ನೋಡುತ್ತಿದ್ದಳು ಆದರೆ ಮಾತನಾಡುತ್ತಿರಲಿಲ್ಲ.ಆದರೆ ಅದು ಪ್ರೀತಿ ಅಂತ ನಾನು ಹೇಳುವುದಿಲ್ಲ.೨ ವರ್ಷಗಳಲ್ಲಿ ಬರೆ ನಾನು ಅವಳನ್ನು ನೋಡುತ್ತಿದೆ ಅವಳು ನನ್ನನು ನೋಡುತ್ತಿದ್ದಳು.ನಾನು ನನ್ನ ಪ್ರೀತಿಯ ವಿಷಯ ಅವಳಿಗೆ ಹೇಳಲಿಲ್ಲ ಅವಳು ಹೇಳಲಿಲ್ಲ.ಹೈಸ್ಕೂಲ್ ರಜೆಯ ಸಮಯದಲ್ಲಿ ಅಜ್ಜಿಯ ಮನೆಗೆ ಹೋಗಿದ್ದೆ.ಆ ಸಮಯದಲ್ಲಿ ಅವಳ ತಂದೆಗೆ ಮಡಿಕೇರಿಗೆ ಟ್ರಾನ್ಸಫರ್ ಆಗಿತ್ತು.ನಾನು ವಾಪಸು ಬರುವುದರೊಳಗೆ ಎಲ್ಲರೂ ಮಡಿಕೇರಿಗೆ ಹೋಗಿಬಿಟ್ಟಿದ್ದರು.ಅಷ್ಟೆ ಅದೇ ಕೊನೆಯ ಸಾರಿ ಮತ್ತೆ ಅವಳು ನನಗೆ ಸಿಗಲೇ ಇಲ್ಲ.ಇಂದು ಮತ್ತೆ ಸಿಕ್ಕಿದ್ದಾಳೆ ಗಂಡ ಮತ್ತು ಮಗುವಿನ ಜೊತೆ.
ನಾನೇ ಪ್ರಸನ್ನ ಅಂತ ಹೇಳಿದರೆ ಅವಳ ನೆಮ್ಮದಿ ಸಂಸಾರ ಹಾಳಾಗುವ ಸಾಧ್ಯತೆ ಇದೆ ಅಂದುಕೊಂಡು ಮನಸ್ಸನ್ನು ಗಟ್ಟಿಮಾಡಿಕೊಂಡು ಅವಳನ್ನು ಮತ್ತೆ ಭೇಟಿಯಾಗಲ್ಲಿಕ್ಕೆ ಹೋಗಲಿಲ್ಲ.ಈಗವಳು ಬೇರೆಯವರ ಹೆಂಡತಿ ಅವಳ ಬಗ್ಗೆ ಆಲೋಚಿಸುವುದು ತಪ್ಪು ಅಂತ ಮನಸ್ಸು ಹೇಳಿತು ಅದಕ್ಕೆ ಅವಳ ಪ್ರೀತಿ,ಬಾಲ್ಯದ ಹಳೆಯ ನೆನಪುಗಳನ್ನು ಮರೆಯುತ್ತ ಮನೆ ಕಡೆ ಹೊರಟೆ...