Wednesday, 11 March 2020
" ಹಿಂದೂ ಮುಸ್ಲಿಂ"
ಶಿವಮೊಗ್ಗದಲ್ಲಿ ನಮ್ಮ ಗೆಳತಿ ಸೃಷ್ಟಿಯ ಮದುವೆ ಮುಗಿಸಿ ನಾವು 6 ಜನ ಗೆಳೆಯರು ಬೈಕ್ ನಲ್ಲಿ ಆಗುಂಬೆಯ ಸೂರ್ಯಾಸ್ತದ ಸುಂದರವಾದ ದೃಶ್ಯ ವನ್ನು ನೋಡಿ ಪ್ರಕೃತಿಯ ಸೌಂದರ್ಯವನ್ನು ಆರಾಧಿಸುತ್ತಾ ಘಾಟಿಯಿಂದ ಕೆಳಗೆ ಹೋಗುತ್ತಿದ್ದೆವು.
ಆಗುಂಬೆಯ ಕಡಿದಾದ ತಿರುವಿನಲ್ಲಿ ಹೋಗುವುದೇ ಒಂಥರಾ ರೋಮಾಂಚನಕಾರಿ ಅನುಭವ ಹಾಗೂ ಅಪಾಯಕಾರಿ ಕೂಡ.
ಕೆಳಗೆ ಬರುವ ದಾರಿಯ ಒಂದು ತಿರುವಿನಲ್ಲಿ ಬೈಕ್ ನಿಲ್ಲಿಸಿಕೊಂಡು ಮುಸ್ಲಿಂ ದಂಪತಿಗಳು ನಿಂತಿದ್ದರು ಚಿಕ್ಕ ಮಗು ಕೂಡ ಜೊತೆಗಿತ್ತು.ನಮ್ಮನ್ನು ನೋಡಿದ ತಕ್ಷಣ ಸ್ವಲ್ಪ ಭಯಗೊಂಡರು(ನಾವೆಲ್ಲರೂ ಗಡ್ಡಬಿಟ್ಟುಕೊಂಡು ನೋಡುವುದಕ್ಕೆ ಸೇಮ್ ಕಳ್ಳರ ತರಹ ಇದ್ದೇವೆ)
ಮುಸ್ಲಿಂ ಮಹಿಳೆ ನಮ್ಮನ್ನು ನೋಡಿ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡು ತಲೆ ಎತ್ತಲ್ಲಿಲ್ಲ.ಅವರು ಭಯಗೊಂಡಿರುವುದು ಗೊತ್ತಾಗಿತ್ತು ನಮಗೆ.
ನಾವೇ ನಮ್ಮ ಬೈಕ್ ಸ್ಲೋ(ನಿಧಾನವಾಗಿ) ಮಾಡಿ ಹತ್ತಿರ ಹೋದರು ಅವರು ನಮ್ಮನ್ನು ನೋಡಿ ಮಾತನಾಡಿಸಲಿಲ್ಲ ಸಹಾಯ ಬೇಕು ಅಂತ ಕೇಳಲಿಲ್ಲ.ಏನಾದರೂ ಸಹಾಯ ಬೇಕಿದ್ದರೆ ಅವರೇ ಮಾತನಾಡಿಸುತ್ತಿದ್ದರು ಅಂತ ಅಂದುಕೊಂಡು ನಾವು ಸಹ ಅವರನ್ನು ಮಾತನಾಡಿಸದೇ ಹೊರಟೆವು.
ತಿರುಗಿ ನೋಡಿದಾಗ ಅವರು ಬೈಕ್ ಸ್ಟಾರ್ಟ್ ಮಾಡುವುದಕ್ಕೆ ಒದ್ದಾಡುತ್ತಿದ್ದರು.ಆಗಲೇ ಕತ್ತಲಾಗುತ್ತ ಬಂದಿತ್ತು ಮಹಿಳೆ ಮತ್ತು ಮಗು ಜೊತೆಗಿದೆ ಇಂಥ ಸಮಯದಲ್ಲಿ ಬಿಟ್ಟು ಹೋಗುವುದು ಸರಿ ಅಲ್ಲ ಅಂತ ಮನಸ್ಸು ಹೇಳಿತು.ಸಹಾಯ ಮಾಡಿ ಅಂತ ಕೇಳಿದವರಿಗೆ ಮಾತ್ರ ಸಹಾಯ ಮಾಡೋದಲ್ಲ ಕಷ್ಟದಲ್ಲಿರುವವರಿಗೆ ಕೇಳದೆ ಸಹಾಯ ಮಾಡೋದೆ ಮನುಷ್ಯನ ನಿಜವಾದ ಕರ್ತವ್ಯ.ಅವರು ಬೈಯ್ದರು ಏನಾದರೂ ಅಂದರೂ ಪರವಾಗಿಲ್ಲ ಅಂತ ಅಂದುಕೊಂಡು ಬೈಕ್ ತಿರುಗಿಸಿ ಅವರ ಹತ್ತಿರ ಹೋಗಿ ನಿಲ್ಲಿಸಿ" ಅಣ್ಣಾ ಏನು ಪ್ರಾಬ್ಲಂ ಬೈಕ್ ನಲ್ಲಿ ಏನಾದರೂ ತೊಂದರೇನಾ" ಅಂತ ಕೇಳಿದಾಗ ಅವರ ಮುಖದಲ್ಲಿ ಸ್ವಲ್ಪ ಧೈರ್ಯ ಬಂದಿತ್ತು ನಾನು ಅಣ್ಣ ಅಂತ ಕರೆದಿದ್ದಕೆ. "ಹೌದು ಸರ್ ಬೈಕ್ ಸ್ಟಾರ್ಟ್ ಆಗುತ್ತಿಲ್ಲ ಮಗು ಹೆಂಡತಿ ಜೊತೆಗಿದ್ದಾಳೆ ಕತ್ತಲು ಬೇರೆ ಆಗಿದೆ ಆ ಭಯದಲ್ಲಿ ತಲೆ ಸರಿಯಾಗಿ ಕೆಲಸ ಮಾಡುತ್ತಿಲ್ಲ" ಅಂದರು. "ಇವನು ಗುರು ನನ್ನ ಗೆಳೆಯ ಬೈಕ್ ಮೆಕ್ಯಾನಿಕ್ ಅವನು ನಿಮ್ಮ ಬೈಕ್ ನೋಡುತ್ತಾನೆ ಈ ಕಡೆ ಬನ್ನಿ ಅಣ್ಣಾ"ಅಂದೆ.
ಗುರು ಬೈಕ್ ಹತ್ತಿರ ಹೋಗಿ ನೋಡುತ್ತಿದ್ದಾಗ ನಾನು ಅವರನ್ನು ಕೇಳಿದೆ " ನಾವು ಆವಾಗ ಬೈಕ್ ಸ್ಲೋ ಮಾಡಿದಾಗ ಸಹಾಯ ಬೇಕು ಅಂತ ಯಾಕೆ ಕೇಳಲಿಲ್ಲ ನೀವು".ಅದಕ್ಕೆ ಅವರು "ನಿಮ್ಮನ್ನು ನೋಡಿದರೆ ಹಿಂದೂ ಹುಡುಗರ ತರಹ ಇದ್ದೀರಿ ನಾವು ಮುಸ್ಲಿಮರು.ಸಹಾಯ ಕೇಳೋಕೆ ಏನಾದರೂ ತೊಂದರೆ ಮಾಡಿದರೆ ಅನ್ನೋ ಭಯದಲ್ಲಿ ನಿಮ್ಮನ್ನು ಮಾತನಾಡಿಸಲಿಲ್ಲ ಸರ್ ಅಂದರು.ನನಗೆ ಆಶ್ಚರ್ಯವಾಗಿತ್ತು ಅವರ ಆಲೋಚನೆಯನ್ನು ನೋಡಿ.ಆ ಕತ್ತಲೆಯಲ್ಲೂ ಕೇವಲ ಜಾತಿ ನೋಡಿ ನಮ್ಮನ್ನು ಸಹಾಯ ಕೇಳುವುದಕ್ಕೆ ಹಿಂದೆ ಮುಂದೆ ನೋಡಿದ್ದರು.
ನಮ್ಮವರೇ ನಮ್ಮವರ ಹತ್ತಿರ ಸಹಾಯ ಕೇಳೋದಿಕ್ಕೆ ಭಯ ಪಡುತ್ತಿದ್ದಾರೆ.ಈ ಜಾತಿ ಧರ್ಮಗಳು ನಮ್ಮ ನಡುವಿನ ಬಂಧುತ್ವ ಮತ್ತು ನೆಮ್ಮದಿಯನ್ನು ಕಸಿದುಕೊಂಡುಬಿಟ್ಟಿದೆ.
"ಅಣ್ಣಾ ನಂಬಿಕೆ ಭರವಸೆಗಳನ್ನು ಕಳೆದುಕೊಳ್ಳುವುದು ಕೈಕಾಲುಗಳನ್ನು
ಕಳೆದುಕೊಳ್ಳುವುದಕ್ಕಿಂತಲೂ ಕೆಟ್ಟದಾಗಿರುತ್ತದೆ.ಎಲ್ಲಾ ಹಿಂದೂಗಳು ಕೆಟ್ಟವರಲ್ಲ ಹಾಗೆಯೇ ಎಲ್ಲಾ ಮುಸ್ಲಿಮರು ಕೆಟ್ಟವರಲ್ಲ.ನಮ್ಮವರ ಮೇಲೆ ನಾವೇ ನಂಬಿಕೆ ಕಳೆದುಕೊಂಡಿದ್ದರಿಂದ ಕೆಲವು ರಾಜಕಾರಣಿಗಳು ಮತ್ತು ಕೆಲವು ನಮ್ಮ ನಿಮ್ಮ ಧಾರ್ಮಿಕ ನಾಯಕರು ಅದನ್ನು ಸರಿಯಾಗಿ ಬಳಸಿಕೊಂಡು ನಮ್ಮ ನಡುವೆ ಜಾತಿ ಧರ್ಮ ಅನ್ನೋ ವಿಷ ಬೀಜ ಬಿತ್ತಿ ಒಂದಾಗಲಾಗದಷ್ಟು ದೊಡ್ಡ ಕಂದಕ ಮಾಡಿದ್ದಾರೆ.ನಂಬಿಕೆ ಬಹುದೊಡ್ಡದು.ಜಾತಿ ಧರ್ಮವನ್ನು ಮರೆತು ನಾವೆಲ್ಲರೂ ಮೊದಲು ಮನುಷ್ಯರು ಅಂತ ತಿಳಿದಾಗಲೇ ಏನಾದರೂ ಬದಲಾವಣೆ ಸಾಧ್ಯ.
ಮೊದಲು ಹಿಂದುಗಳು ಸರಿಯಾಗಲಿ ಮುಸ್ಲಿಮರು ಸರಿಯಾಗಲಿ ಅನ್ನೋದು ಬಿಟ್ಟು ನಾವೇ ಮುಂದೆ ಹೋಗಿ ಜಾತಿಯನ್ನು ಮರೆತು ಎಲ್ಲರೂ ನಮ್ಮವರು ಅಂತ ನಂಬೋಣ.ಯಾರೋ ಬಂದು ನಮ್ಮ ನಡುವಿನ ಈ ಸಮಸ್ಯೆಯನ್ನು ತೆಗೆದುಹಾಕುತ್ತಾರೆ ಅನ್ನೋ ಆಸೆಯಲ್ಲಿ ಕಾಯುವ ಬದಲು ನಾವೇ ಒಂದು ಹೆಜ್ಜೆ ಮುಂದಡಿ ಇಡೋಣ ಬದಲಾವಣೆ ಕಡೆ.
ಬದಲಾವಣೆ ನಮ್ಮಿಂದಲೇ ಶುರುವಾಗಲಿ ಅಣ್ಣ."ಅಂದೇ
ನನ್ನ ಮಾತು ಕೇಳಿ ಗಂಡಹೆಂಡತಿ ಇಬ್ಬರೂ ಖುಷಿಗೊಂಡಿದ್ದರು.
ಹೌದು ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ ನಮ್ಮ ಸಮಸ್ಯೆ ಯನ್ನು ನಾವೇ ಬಗೆಹರಿಸಿಕೊಳ್ಳಬೇಕು.
ಆಯ್ತು ಇನ್ನುಮುಂದೆ ನಾನು ಹಿಂದೂ ಮುಸ್ಲಿಂ ಅಂತ ಜಾತಿಯ ಬಗ್ಗೆ ಯೋಚನೆ ಮಾಡುವುದಿಲ್ಲ ಭಯಪಡುವುದಿಲ್ಲ ನನ್ನ ಮಕ್ಕಳಿಗೂ ಈ ಜಾತಿಯ ಬಗ್ಗೆ ಹೇಳುವುದಿಲ್ಲ ಅಂದಾಗ ಖುಷಿ ಆಗಿತ್ತು ಮನಸ್ಸಿಗೆ. ಈ ಹಿಂದೆ ಭಯಗೊಂಡಿದ್ದ ಅವರ ಹೆಂಡತಿ ಏನು ಭಯವಿಲ್ಲದೆ ಖುಷಿಯಲ್ಲಿದ್ದರು.ಗುರು ಬೈಕ್ ರೆಡಿ ಮಾಡಿದ್ದ ಅಷ್ಟರಲ್ಲಿ.
"
ದಂಪತಿಗಳು ಖುಷಿಯಾಗಿದ್ದರು ನಮ್ಮ ಜೊತೆ ಮಾತನಾಡಿದ ಮೇಲೆ. ಬನ್ನಿ ನಮ್ಮ ಮನೆಗೆ ಸಮಯ ಸಿಕ್ಕಾಗ ಅಂದರು ಆಯ್ತು ಬರುತ್ತೇವೆ ಅಂತ ಹೇಳಿದೆವು.
"ಮಣ್ಣಿನ ಮಡಿಕೆ ಹಾಗೂ ಸುಂದರವಾದ ಸಂಬಂಧದ ಬೆಲೆ ಅದನ್ನು ಮಾಡುವವರಿಗೆ ಮಾತ್ರ ತಿಳಿದಿರುತ್ತದೆಯೇ ಹೊರತು ಒಡೆಯುವವರಿಗಲ್ಲ".
ಮುಸ್ಲಿಮ್ ದಂಪತಿಗಳು ಬೈಕ್ ಸ್ಟಾರ್ಟ್ ಮಾಡಿ ಹೊರಟಾಗ ಅವರ ಮುಖದಲ್ಲಿ ಒಂಥರಾ ನೆಮ್ಮದಿ ಕಾಣಿಸುತ್ತಿತ್ತು.ಅದನ್ನು ನೋಡಿದಾಗ
ನನ್ನ ಮನಸ್ಸಿನಲ್ಲಿ ಏನೋ ಒಂಥರಾ ಹೇಳಲಾಗದ ಖುಷಿ ಆಗುತ್ತಿತ್ತು...ದ್ವೇಷಿಸುವುದನ್ನು ಕ್ಷಣಮಾತ್ರದಲ್ಲಿ ಕಲಿಯುವ ಜನರು ಪ್ರೀತಿಸುವುದನ್ನು ಕಲಿಯಲು ಮಾತ್ರ ಜೀವನದ ಕೊನೆಯ ಕ್ಷಣದವರೆಗೂ ಕಾಯುತ್ತಾರೆ...
ಹಿಂದು ಮುಸ್ಲಿಮನಾಗು
ಬೌದ್ಧ ಕ್ರೈಸ್ತನೆ ಆಗು
ಚಾರ್ವಾಕನೇ ಆಗು
ಭೋಗ ಬಯಸಿ
ಏನಾದರೂ ಆಗು
ಹಾರೈಸಿದಂತಾಗು
ಏನಾದರೂ ಸರಿಯೆ –
ಮೊದಲು ಮಾನವನಾಗು
(ಸಿದ್ಧಯ್ಯ ಪುರಾಣಿಕ ಅವರು ಬರೆದ ಸಾಲುಗಳು ಇದು)....
✍️ಎನ್.ಆರ್.ಕೆ.ನೇರಳಕಟ್ಟೆ
Subscribe to:
Post Comments (Atom)
No comments:
Post a Comment